ತಮ್ಮದೇ ಶೈಲಿಯಲ್ಲಿ ಮೋದಿಗೆ ಸ್ವಾಗತ ಕೋರಿದ ಸಿಎಂ!

ಬೆಂಗಳೂರು: ಇಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಸಿಎಂ ತಮ್ಮದೇ ಶೈಲಿಯಲ್ಲಿ ಸ್ವಾಗತ ಕೋರಿದ್ದಾರೆ.

ನಗರದಲ್ಲಿ ಎಲ್ಲೆಡೆ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ. ಮೇಕ್ರಿ ಸರ್ಕಲ್ ಬಳಿ ವಾರ್ತಾ ಇಲಾಖೆಯಿಂದ ನಂಬರ್ 01 ರಾಜ್ಯಕ್ಕೆ ಸುಸ್ವಾಗತ ಎಂಬ ಜಾಹಿರಾತನ್ನು ಹಾಕಲಾಗಿದೆ. ಎರಡು ದಿನಗಳ ಹಿಂದೆ ಮೇಕ್ರಿ ಸರ್ಕಲ್ ಬಳಿ ಹಾಕಲಾಗಿದ್ದ ಇನ್ನೀತರ ಕಟೌಟ್‍ಗಳನ್ನು ತೆಗೆದು ಬಿಜೆಪಿ ಧ್ವಜ, ಬ್ಯಾನರ್, ಫ್ಲೆಕ್ಸ್ ಅಳವಡಿಸಲಾಗಿದೆ.

ವಾರ್ತಾ ಇಲಾಖೆಯ ಜಾಹಿರಾತು ಸ್ಥಳದಲ್ಲಿ ಬೇರೆ ಬ್ಯಾನರ್ ಹಾಕಲು ಸಾಧ್ಯವಿರದ ಕಾರಣ ಸುತ್ತಲಿನ ಬಿಜೆಪಿ ಬ್ಯಾನರ್‍ಗಳಿಗೆ ಸಿಎಂ ಸಿದ್ದರಾಮಯ್ಯ ಹೋಲ್ಡಿಂಗ್ಸ್ ನಿಂದ ಟಾಂಗ್ ನೀಡಲಾಗಿದೆ. `ದೇಶದ ನಂಬರ್ 1 ರಾಜ್ಯಕ್ಕೆ ಸ್ವಾಗತ’ ಅನ್ನೋ ಸಿಎಂ ಸಿದ್ಧರಾಮಯ್ಯ ಭಾವ ಚಿತ್ರವಿರೋ ಹೋಲ್ಡಿಂಗ್ಸ್ ಹಾಕುವ ಮೂಲಕ ಬಿಜೆಪಿ ಗೆ ಹಾಗೂ ಪ್ರಧಾನಿ ಮೋದಿಗೆ ವ್ಯಂಗ್ಯವಾಗಿ ಸ್ವಾಗತ ಮಾಡಲಾಗಿದೆ.

ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ರಾಜ್ಯಕ್ಕೆ ಏನಾದರೂ ಕೊಡುಗೆ ಘೋಷಿಸುವ ಸಾಧ್ಯತೆ ಇದೆ. 16 ಜಿಲ್ಲೆಗಳಿಂದ ಜನರನ್ನು ಕರೆತರಲು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸೇರಿದಂತೆ ಸಾವಿರಾರು ವಾಹನಗಳನ್ನು ಬುಕ್ ಮಾಡಲಾಗಿದೆ. ಊಟದ ವ್ಯವಸ್ಥೆಗಾಗಿ 600 ಮಂದಿ ಅಡುಗೆ ಭಟ್ಟರನ್ನು ನಿಯೋಜಿಸಲಾಗಿದ್ದು, 250 ಫುಡ್ ಕೌಂಟರ್ ತೆರೆಯಲಾಗಿದೆ. ಜೊತೆಗೆ 75 ಇ – ಶೌಚಾಲಯ, 270 ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಾದ್ಯಂತ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *