ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರೋ ಸಿಎಂ

– 24 ಗಂಟೆಯೊಳಗೆ ಹಂತಕರನ್ನು ಪತ್ತೆಹಚ್ಚುವಂತೆ ಡಿಐಜಿಗೆ ಖಡಕ್ ವಾರ್ನಿಂಗ್
– ಪ್ರಕರಣ ಸಿಐಡಿಗೆ ವಹಿಸುವ ಸಾಧ್ಯತೆ

ಬೆಂಗಳೂರು: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹತ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಪೊಲೀಸ್, ಗುಪ್ತಚರ ಮತ್ತು ಖುದ್ದು ಗೃಹ ಸಚಿವ ರಾಮಲಿಂಗಾರೆಡ್ಡಿಯಿಂದ ಹತ್ಯೆಯ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಗೌರಿ ಹತ್ಯೆ ಹಿನ್ನಲೆಯಲ್ಲಿ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನೆಲ್ಲ ಈಗಾಗಲೇ ರದ್ದುಗೊಳಿಸಿದ್ದಾರೆ.

ಡಿಜಿಪಿಗೆ ಖಡಕ್ ಸೂಚನೆ: ಘಟನೆ ಬಗ್ಗೆ ಮಾಹಿತಿ ನೀಡಲು ಗೃಹಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಮಧ್ಯರಾತ್ರಿಯೇ ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಸಿಎಂ ನೂತನ ಗೃಹ ಸಚಿವ ರಾಮಲಿಂಗ ರೆಡ್ಡಿಗೆ ಧೈರ್ಯ ತುಂಬಿದ್ದಾರೆ. ಗೃಹ ಸಚಿವರು ಪ್ರಕರಣದ ಪೂರ್ಣ ಮಾಹಿತಿ ನೀಡಿದ ಬಳಿಕ ಸಿಎಂ, ಡಿಜಿಪಿಗೆ ಗೃಹ ಸಚಿವರ ಸಮ್ಮುಖದಲ್ಲಿ ಖಡಕ್ ಸೂಚನೆ ನೀಡಿದ್ದಾರೆ. ಗೌರಿ ಹತ್ಯೆ ಹಿಂದೆ ಇರುವ ಕೊಲೆಗಾರರನ್ನ 24 ಗಂಟೆ ಒಳಗೆ ಬಂಧಿಸಬೇಕು. ನೀವು ಏನ್ ಮಾಡ್ತೀರೊ ಗೊತ್ತಿಲ್ಲ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಬೇಗ ಪತ್ತೆ ಹಚ್ಚಿ. ಇಂಥವರನ್ನ ಮಟ್ಟ ಹಾಕಿ ಅಂತಾ ಆರ್.ಕೆ.ದತ್ತಾಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಿಐಡಿಗೆ?: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಇಂದು ಸಿಐಡಿಗೆ ವಹಿಸುವ ಸಾಧ್ಯತೆಗಳಿವೆ. ಹೀಗಾಗಿ ಇಂದು ಸಂಜೆ ಗೃಹಸಚಿವ ರಾಮಲಿಂಗಾರೆಡ್ಡಿ ಜೊತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ಗುಪ್ತಚರ ಇಲಾಖೆ, ಗೌರಿ ಲಂಕೇಶ್ ರವರಿಗೆ ಇದ್ದ ಸಂಪರ್ಕ ಹಾಗು ಚಟುವಟಿಕೆಗಳ ಮಾಹಿತಿ ಬಗ್ಗೆಯೂ ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಇಂದು ಸಂಜೆಯ ವೇಳೆ ಪೊಲೀಸರು ಪ್ರಕರಣದ ಪ್ರಾಥಮಿಕ ಮಾಹಿತಿ ರೆಡಿ ಮಾಡಲಿದ್ದಾರೆ.

ಸಿಎಂ ಭೇಟಿಗೆ ಅವಕಾಶವಿಲ್ಲ: ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸ ರದ್ದು ಮಾಡಿರುವ ಸಿಎಂ, ತಮ್ಮ ಕಾವೇರಿ ನಿವಾಸಕ್ಕೆ ಯಾರನ್ನೂ ಬಿಡದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದು ಯಾರಿಗೂ ಸಿಎಂ ಭೇಟಿಗೆ ಅವಕಾಶವಿಲ್ಲ. ಸಿಎಂ ಸೂಚನೆ ಮೇರೆಗೆ ಪೊಲೀಸರು ಯಾರನ್ನೂ ಒಳಗೆ ಬಿಡುತ್ತಿಲ್ಲ. ಸಿಎಂ ನೋಡಲು ದೂರದ ಊರುಗಳಿಂದ ಬಂದಿರುವ ಸಾರ್ವಜನಿಕರು ಗೇಟ್ ಬಳಿಯೇ ಕಾದು ಕುಳಿತಿದ್ದಾರೆ.

Comments

Leave a Reply

Your email address will not be published. Required fields are marked *