ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

ಬಾಗಲಕೋಟೆ: ಹೈ-ವೊಲ್ಟೇಜ್ ಕಣ ಬದಾಮಿಯಲ್ಲಿ ಜಾತಿಗಣಿತದ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಕೈ ತಪ್ಪಿ ಹೋಗಲಿರುವ ವಾಲ್ಮಿಕಿ ಸಮುದಾಯದ ಮತಗಳ ಧೃವೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಬದಾಮಿಯಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಸಿಎಂ ಪರ ಪ್ರಚಾರ ಮಾಡಿಸುವ ಮೂಲಕ ಕೈ ತಪ್ಪಿ ಹೊಗಲಿರುವ ಮತಗಳ ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದು, ಒಡೆದು ಹೋಗುವಂತಿದ್ದ ವಾಲ್ಮಿಕಿ ಮತಗಳು ಮತ್ತೆ ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿಯಿಂದ ರಾಮುಲು ಸ್ವರ್ಧೆ ಮಾಡಿದ ಹಿನ್ನೆಲೆ ಕಾಂಗ್ರೆಸ್‍ಗೆ ನಿರ್ಣಾಯಕವಾಗಿದ್ದ ಸುಮಾರು ಇಪ್ಪತ್ತು ಸಾವಿರ ವಾಲ್ಮಿಕಿ ಸಮುದಾಯದ ಮತಗಳು ಬಿಜೆಪಿಗೆ ಶಿಫ್ಟ್ ಆಗುವ ಸಾಧ್ಯತೆ ಇತ್ತು. ಬಹುತೇಕ ವಾಲ್ಮಿಕಿ ಸಮುದಾಯದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಬಿಜೆಪಿ, ರಾಮುಲು ಪರ ಮತ ಚಲಾಯಿಸುವಂತೆ ಮನವಿ ಮಾಡಿತ್ತು. ಸ್ವಜಾತಿ ಅಭ್ಯರ್ಥಿ ಸ್ವರ್ಧೆಯಿಂದ ವಾಲ್ಮಿಕಿ ಸಮುದಾಯದ ಮುಖಂಡರು ಕೂಡಾ ರಾಮುಲು ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್‍ನ್ನು ಇಕ್ಕಟ್ಟಿನ ಸಿಲುಕಿಸಿತ್ತು.

ಈ ಭಾಗದ ಎಸ್ಟಿ ಪ್ರಭಾವಿ ನಾಯಕ ಸತೀಶ್ ಜಾರಕಿಹೋಳಿ ಸಮುದಾಯದ ಮನವೊಲಿಸಿದ್ರು. ವಾಲ್ಮಿಕಿ ಸಮುದಾಯ ಬಿಜೆಪಿ ಬೆಂಬಲಿಸುವ ಸ್ಪಷ್ಟ ನಿರ್ಧಾರ ಸೂಚಿಸಿತ್ತು. ಇದರಿಂದ ಕೊಂಚ ಹಿನ್ನೆಡೆ ಆಗುವ ಸಾಧ್ಯತೆ ಅರಿತ ಕಾಂಗ್ರೆಸ್, ನಟ ಕಿಚ್ಚ ಸುದೀಪ್ ಮೂಲಕ ಸಿಎಂ ಪರ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದೆ.

ಇದರಿಂದ ಬಿಜೆಪಿ ಪಾಲಾಗಲಿದ್ದ ಇಪ್ಪತ್ತು ಸಾವಿರ ಮತಗಳ ಪೈಕಿ ಒಂದಷ್ಟು ಮತ್ತೆ ಕಾಂಗ್ರೆಸ್ ತೆಕ್ಕೆಗೆ ವಾಪಸ್ ಆಗುವ ಸಾಧ್ಯತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ಟಾರ್ ಕ್ಯಾಂಪೇನ್‍ನಿಂದಾಗಿ ಇತರೆ ವರ್ಗದ ಒಂದಿಷ್ಟು ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ಯೋಜನೆಯಾಗಿದೆ. ಬಿಜೆಪಿ ಮತದ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿರುವ ಹಿನ್ನೆಲೆ ಪ್ರತಿತಂತ್ರವಾಗಿ ಬಿಜೆಪಿ ಏನು ಮಾಡಲಿದೆ ಎಂಬ ಕುತೂಹಲ ಮೂಡಿದೆ.

Comments

Leave a Reply

Your email address will not be published. Required fields are marked *