ಸಿಎಂ ಮನೆಯಲ್ಲಿ ಡಿಕೆಶಿಯ ರಾಜಗುರುವಿನಿಂದ ವಿಶೇಷ ಹೋಮ!

– ನಿಖಿಲ್ ಗೆಲುವಿಗಾಗಿ ವಿಶೇಷ ಪೂಜೆ ಮಾಡಿಸಿದ ಎಚ್‍ಡಿಕೆ
– ಲೂಟಿ ಹೊಟೆಯೋ ಸಂಸ್ಕೃತಿ ಬಿಜೆಪಿಯವ್ರದ್ದು: ಸಿಎಂ
– ಬಿಎಂಟಿಸಿಯಲ್ಲಿ ಆರ್.ಅಶೋಕ್ ಲೂಟಿ ಹೊಡೆದಿದ್ದಾರೆ

ಬೆಂಗಳೂರು: ನಾನು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ‘ಜೋಡೆತ್ತುಗಳು’ ಎಂದು ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರು, ಈಗ ಡಿಕೆಶಿಯ ರಾಜಗರುವನ್ನೇ ಮನೆಗೆ ಕರೆಸಿ ಮಗನ ಅಭ್ಯುದಯಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಜೆಪಿ ನಗರ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ ಅವರು ನಿಖಿಲ್ ಗೆಲುವಿಗಾಗಿ ಇಂದು ವಿಶೇಷ ಪೂಜೆ ನೆರವೇರಿಸಿದರು. ರಾಜಗುರು ದ್ವಾರಕನಾಥ್ ನೇತೃತ್ವದಲ್ಲಿ 7 ಜನ ಪುರೋಹಿತರು ವಿಶೇಷ ಹೋಮ ನಡೆಸಿದರು. ಸಿಎಂ ಕುಮಾರಸ್ವಾಮಿ ಅವರು ಬೆಳಗ್ಗೆಯಿಂದ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಯಾವುದೇ ಪ್ರಚಾರಕ್ಕೆ ತೆರಳಲಿಲ್ಲ.

ಪೂಜೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಲೂಟಿ ಹೊಟೆಯುವ ಸಂಸ್ಕೃತಿ ಬಿಜೆಪಿಯವರದ್ದು. ಬಿಜೆಪಿ ಮುಖಂಡ ಆರ್.ಅಶೋಕ್ ಇಟ್ಟಂತೆ ನಾನು ದುಡ್ಡು ಇಟ್ಟಿಲ್ಲ. ಅವರು ಎಲ್ಲೆಲ್ಲಿ ಲೂಟಿ ಮಾಡಿದ್ದಾರೆಂದು ನನಗೆ ಗೊತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಾವಿರ ಕೋಟಿ ರೂ. ಠೇವಣಿ ಇಟ್ಟಿದ್ದೆ. ಆದರೆ ಬಿಜೆಪಿ ಅಧಿಕಾರದ ವೇಳೆ ಬಿಎಂಟಿಸಿ ಹರಾಜು ಹಾಕಿ ಆರ್.ಅಶೋಕ್, ಸಾಲ ಮಾಡಿ ಹಣ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಐಟಿ ಅಧಿಕಾರಿಗಳು ರಾಜ್ಯದಲ್ಲಿ ಗುರುವಾರ ದಾಳಿ ಮಾಡಿದ್ದರು. ಅವರಿಗೆ ಎಷ್ಟು ಕೋಟಿ ರೂ. ಸಿಕ್ಕಿದೆ. ಅಧಿಕಾರಿಗಳ ಕೈಗೆ 10 ರೂಪಾಯಿ ಕೂಡ ಸಿಕ್ಕಿಲ್ಲ. ಆದರೆ ಮಾಧ್ಯಮಗಳಲ್ಲಿ ಅಷ್ಟು ಕೋಟಿ, ಇಷ್ಟು ಕೋಟಿ ರೂ. ಅಂತ ವರದಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಿಸಿದ್ದಾರೆ. ಅಧಿಕಾರಿಗಳು ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿದ್ರಾ? ಪಾಪ ಬಿಜೆಪಿ ಅವರ ಬಳಿ ದುಡ್ಡು ಇಲ್ವಾ? ಕೈ ಮುಗಿದು ಬಿಜೆಪಿ ವೋಟ್ ಕೇಳುತ್ತಿದ್ದಾರಾ? ಐಟಿ ದಾಳಿ ವಿಚಾರದ ಬಗ್ಗೆ ನಾನು ಗಮನ ಹರಿಸುತ್ತಿದ್ದೇನೆ. ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ಅವರು ಏನು ಮಾಡುತ್ತಾರೆ ನೋಡೋಣ. ಬಳಿಕ ನಮ್ಮ ಹೋರಾಟ ನಿರ್ಧಾರ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆ ಮೂಲಕ ಸಿಎಂ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ನಾನು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವುದೇ ನೈತಿಕತೆ ಇಲ್ಲ. ಹೀಗಾಗಿ ಅವರೇ ಈ ಕೆಲಸ ಮಾಡಿದ್ದಾರೆ. ನನ್ನ ಮೇಲೆ ಬಿ.ಎಸ್.ಯಡಿಯೂರಪ್ಪ ಹಾಕಿದ ಕೇಸುಗಳನ್ನು ಕಳೆದ 12 ವರ್ಷಗಳಿಂದ ಮೆರೀಟ್ ಮೇಲೆ ಫೈಟ್ ಮಾಡುತ್ತಿರುವೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮೇಲಿನ ಕೇಸ್‍ಗಳನ್ನು ಹೇಗೆ ವಿಲೇವಾರಿ ಮಾಡಿಸಿಕೊಂಡರು ಅಂತ ನನಗೆ ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬುಡುಮೇಲು ಮಾಡಿ ಕೇಸ್ ವಿಲೇವಾರಿ ಮಾಡಿಸಿಕೊಂಡಿದ್ದಾರೆ. ನಾನು ಯಾವುದೇ ಸಂವಿಧಾನ ಸಂಸ್ಥೆಗಳನ್ನು ದುಡ್ಡು ಕೊಟ್ಟು ಕೊಂಡು ಕೊಂಡಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *