ವ್ಯಾಕ್ಸು ಪಾಕ್ಸು ಹಾಕೊಂಡು ಹೋಗುವ ಮೋದಿ ಇಷ್ಟವಾಗ್ತಾರೆ, ಬಿಸಿಲಲ್ಲಿ ಓಡಾಡುವ ನಾವು ಇಷ್ಟವಾಗಲ್ವಾ: ಸಿಎಂ

ಉಡುಪಿ: ವ್ಯಾಕ್ಸು ಪಾಕ್ಸು ಹಾಕೊಂಡು ಹೋಗುವ ಮೋದಿ ಇಷ್ಟಾಗಬಹುದು. ಆದ್ರೆ ದಿನಕ್ಕೊಮ್ಮೆ ಮುಖ ತೊಳೆದುಕೊಂಡು, ಬಿಸಿಲಲ್ಲಿ ಓಡಾಡುವ ನಾವು ಇಷ್ಟವಾಗಲ್ವಾ? ಮಿರಿ ಮಿರಿ ಹೊಳೆಯುವವರನ್ನು ನೋಡಿ ವೋಟು ಹಾಕ್ತೀರಾ ಅಂತ ಸಿಎಂ ಕುಮಾರಸ್ವಾಮಿ ಪ್ರಧಾನಿಗೆ ಟಾಂಗ್ ಕೊಟ್ಟಿದ್ದಾರೆ.

ಕಾರ್ಕಳದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಬೇರೆಯವರು ಯಾರು ದೇಶಕ್ಕೆ ರಕ್ಷಣೆ ಕೊಡಲು ಸಾಧ್ಯವಿಲ್ವಾ? ದೇಶದಲ್ಲೇ ಕರಾವಳಿ ಜನ ಪ್ರಜ್ಞಾವಂತರು ಆದ್ರೆ ತಿಳುವಳಿಕೆ ಇರುವ ಕರಾವಳಿಗರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸೋದ್ಯಾಕೆ? ಮೋದಿ ಎಂದು ಕೂಗುವ ಟ್ರೆಂಡ್ ಶುರುವಾಗಿದೆ. ಮೋದಿ ಅಂದ್ರೆ ಅವರು ಬರಲ್ಲ. ಹತ್ತಿರದಲ್ಲಿ ಇರುವ ನಾವು ನಿಮ್ಮ ಕಷ್ಟಕ್ಕೆ ಜೊತೆಯಾಗ್ತೇವೆ. ಯುವಕರು ದಾರಿ ತಪ್ಪಿ ಮೋದಿಗೆ ಮತ ಹಾಕ್ತಾರೆ. ನಾವು ಕೆಲಸ ಮಾಡಬೇಕು, ವೋಟು ಮೋದಿಗಾ? ವ್ಯಾಕ್ಸು ಪಾಕ್ಸು ಹಾಕೊಂಡು ಮಿರಿಮಿರಿ ಮಿಂಚುವ ಮುಖ ನಿಮಗೆ ಇಷ್ಟವಾಗುತ್ತೆ. ಆದ್ರೆ ದಿನಕ್ಕೊಮ್ಮೆ ಮುಖ ತೊಳೆದುಕೊಂಡು, ಬಿಸಿಲಲ್ಲಿ ಓಡಾಡುವ ನಾವು ಇಷ್ಟವಾಗಲ್ವಾ? ಎಂದು ಟೀಕಿಸಿದರು. ಇದನ್ನೂ ಓದಿ:ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಎಂ

ಜನರು ಮೋದಿ ಮುಖ ನೋಡಿ ಮತ ಹಾಕಬೇಕಂತೆ. ದೇಶದ ರಕ್ಷಣೆ ಮೋದಿ ಮಾಡಬೇಕಾಗಿಲ್ಲ ರಕ್ಷಣಾ ಇಲಾಖೆ ಮಾಡುತ್ತದೆ. ಎಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಎಲ್ಲಾದರು ಬಾಂಬ್ ಸ್ಫೋಟವಾಯ್ತಾ? ದೇಶದಲ್ಲಿ ಎಲ್ಲೂ ಅಹಿತಕರ ಘಟನೆ, ಗುಂಡಿನ ಚಕಮಕಿ ನಡೆದಿಲ್ಲ. ಗೌಡರ ಕಾಲದಲ್ಲಿ ಇಂಡೋ ಪಾಕ್ ಘರ್ಷಣೆ ನಡೆದಿಲ್ಲ. ದೇಶಕ್ಕೆ ಹಲವು ಪ್ರಧಾನಿಗಳು ಬಂದು ಹೋಗಿದ್ದಾರೆ. ಮೋದಿ ಒಬ್ಬರೇ ದೇಶದ ಬಲಾಡ್ಯ ಪ್ರಧಾನಿಯಾ? ವಾಜಪೇಯಿ ಭದ್ರತೆ ಕೊಟ್ಟಿರಲಿಲ್ವೇ? ಮೋದಿ ಬರುವ ತನಕ ದೇಶಕ್ಕೆ ಭದ್ರತೆ ಇರಲಿಲ್ವೇ? ಕರಾವಳಿಗೆ ಮೋದಿ ಕೊಡುಗೆ ಏನು? ಬ್ಯಾಂಕ್, ಏರ್ ಪೋರ್ಟ್ ದಿವಾಳಿ ಎಬ್ಬಿಸಿದ್ದೇ ಮೋದಿಯ ಸಾಧನೆ. ವಿಜಯ ಬ್ಯಾಂಕ್ ಉಳಿವಿಗೆ ದೇವೇಗೌಡರು ಸಹಾಯ ಮಾಡಿದ್ದರು. ಆದ್ರೆ ವಿಜಯ ಬ್ಯಾಂಕ್‍ನ ಬರೋಡಾ ಬ್ಯಾಂಕ್ ಜೊತೆ ವಿಲೀನ ಮಾಡಿದ್ದೇ ಮೋದಿ ಕೊಡುಗೆ ಎಂದು ಕಿಡಿಕಾರಿದರು.

ಪುಲ್ವಾಮ ದಾಳಿ ಬಗ್ಗೆ ತಾವು ಕೊಟ್ಟ ಹೇಳಿಕೆಗೆ ಪ್ರತಿಕ್ರಿಯಿಸಿ, ಪುಲ್ವಾಮ ಘಟನೆ ಬಗ್ಗೆ ನಾನು ಮಾತನಾಡಲೇ ಇಲ್ಲ. ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿ ಜೊತೆ ಊಟಕ್ಕೆ ಸೇರಿದಾಗ ಅವರು ಮಾತನಾಡಿದ್ದರು. ನನ್ನ ಹೇಳಿಕೆ ಮಾಧ್ಯಮದಲ್ಲಿ ತಿರುಚಲಾಗಿದೆ. ಬಾಂಬ್ ಹಾಕುವ ಸಂಸ್ಕೃತಿ ಬಿಜೆಪಿಯದ್ದು. ಶಾಂತಿ ನೆಮ್ಮದಿ ಮಾರ್ಗದಲ್ಲಿ ನಾವು ನಡೆಯುತ್ತೇವೆ. ನಾನು ಮಾಡುವ ಒಳ್ಳೆಯ ಕೆಲಸ ಯಾರೂ ನೋಡಿಲ್ಲ. ಗಡುವು ಕೊಡುವುದೇ ವಿಪಕ್ಷದ ಕೆಲಸ ಆಯ್ತು ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *