ಮೋದಿ ಎಚ್‍ಡಿಡಿಗೆ ಕೇಳಿದ ಪ್ರಶ್ನೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ದೇಶ ಒಡೆಯುವ ಮಂದಿಗೆ ಬೆಂಬಲ ನೀಡುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕ ಮಾಜಿ ಪ್ರಧಾನಿ ದೇವೇಗೌಡ ಅವರು ಈ ಬಗ್ಗೆ ತಮ್ಮ ನಿಲುವನ್ನು ತಿಳಿಸಬೇಕು ಎಂದಿದ್ದ ಪ್ರಧಾನಿ ಮೋದಿ ಅವರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ವಿಚಾರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವ ಉಗ್ರರ ಪರವಾಗಿ ಕಾಂಗ್ರೆಸ್ ಪಕ್ಷ ಆಗಲಿ ವಿಪಕ್ಷವಾಗಲಿ ಬೆಂಬಲ ಕೊಟ್ಟಿದೆ? ನರೇಂದ್ರ ಮೋದಿ ಅವರ ಭಾಷಣ ಅದು ಒಂದು ಪ್ರಧಾನ ಮಂತ್ರಿಗೆ ಶೋಭೆ ತರುವಂತಹ ಭಾಷಣಗಳಲ್ಲ. ಮೋದಿ ಸುಮ್ಮನೆ ಸುಳ್ಳು ಹೇಳಿಕೊಂಡು ಹೋಗ್ತಾರೆ. ದೇಶದ ಅಭಿಮಾನ ಎಂಬುದು ಮೋದಿ ಅವರೊಬ್ಬರಿಗೆ ಗುತ್ತಿಗೆ ಕೊಟ್ಟಿಲ್ಲ ವಾಗ್ದಾಳಿ ನಡೆಸಿದರು.

ನಾವು ಹಿಂದೂಗಳು ಈ ದೇಶದ ಭಾರತೀಯರು. ನಮಗೂ ದೇಶದ ರಕ್ಷಣೆ ಹೇಗೆ ಮಾಡಬೇಕು ಅಂತ ಅರಿವಿಟ್ಟುಕೊಂಡಿದ್ದೇವೆ. ದೇವೇಗೌಡರು ಯಾವ ರೀತಿ ಪ್ರಧಾನಿಯಾಗಿ ಹೇಗೆ ದೇಶ ಕಾಪಾಡಿದ್ದಾರೆ ಎನ್ನುವುದನ್ನು ಇತಿಹಾಸ ತೆಗೆದು ನೋಡಿದರೆ ಗೊತ್ತಾಗುತ್ತದೆ ಎಂದು ಪ್ರಧಾನಿ ಮೋದಿಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ.

ಮೋದಿ ಹೇಳಿದ್ದೇನು?
ಜಮ್ಮು-ಕಾಶ್ಮೀರದಲ್ಲಿ ದೇಶ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್(ಎನ್‍ಸಿ) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಅದೇ ಕಾಂಗ್ರೆಸ್ ಜೊತೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ದೇಶ ಇಬ್ಭಾಗದ ಮಾತನಾಡುತ್ತಿರುವರ ನಿಮ್ಮ ಮೈತ್ರಿಯ ಪಕ್ಷದ ಬಗ್ಗೆ ನಿಮ್ಮ ನಿಲುವು ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದರು.

ತೆಲಂಗಾಣದ ಸಿಕಂದರಾಬಾದ್ ನಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದದಲ್ಲಿ ಮಾತನಾಡಿದ ಮೋದಿ, ದೇವೇಗೌಡಜೀ, ನೀವು ದೇಶದ ಮಾಜಿ ಪ್ರಧಾನಿಗಳು. ನಿಮ್ಮ ಪುತ್ರ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರ ಕುಟುಂಬಸ್ಥರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ನಿಮ್ಮ ಮೈತ್ರಿ ಪಕ್ಷ ಎನ್‍ಸಿ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದು ಹೇಳುತ್ತಿದೆ. ಈ ಬಗ್ಗೆ ದೇವೇಗೌಡರೇ ಚುನಾವಣೆ ಪ್ರಚಾರದ ವೇಳೆ ತಮ್ಮ ನಿಲುವು ಏನು ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿದ್ದರು.

Comments

Leave a Reply

Your email address will not be published. Required fields are marked *