ಕುಮಾರಸ್ವಾಮಿ ಸರ್ಕಾರದ ಅಂಗಳಕ್ಕೆ ಚೆಂಡು ಎಸೆದ ಮೋದಿ ಸರ್ಕಾರ!

ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಒಂದರಂತೆ ಒಂದು ಸವಾಲುಗಳು ಎದುರಾಗುತ್ತಿದೆ.

ಶುಕ್ರವಾರ ವಿಧಾನ ಸದನದಲ್ಲಿ ಬಿಜೆಪಿಯವರು ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಸಭಾತ್ಯಾಗ ಮಾಡಿ ಹೊರಟಿದ್ದರು. ಈ ತಲೆನೋವಿನ ಜೊತೆ ಸಿಎಂ ಕುಮಾರಸ್ವಾಮಿಗೆ ಸರ್ಕಾರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ತಲೆನೋವು ಎದುರಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೊಸದಾಗಿ ಶಿಫಾರಸ್ಸು ಕಳುಹಿಸಿ ಕೊಡಬೇಕು. ಹೊಸದಾಗಿ ರಚನೆಯಾಗಿರುವ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಬರಬೇಕು. ಅಷ್ಟೇ ಅಲ್ಲದೇ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬಗ್ಗೆಯೂ ಹೊಸದಾಗಿ ಶಿಫಾರಸ್ಸು ಕಳುಹಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರದ ಅಂಗಳಕ್ಕೆ ಮೋದಿ ಸರ್ಕಾರ ಚೆಂಡು ಎಸೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಮತ್ತೊಂದು ಟೆನ್ಷನ್ – ಹೊಸ ಬೇಡಿಕೆ ಇಟ್ಟ ಲಿಂಗಾಯತ ಸಮುದಾಯ

ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಧರ್ಮ ಗುರುಗಳು ಮತ್ತು ಸ್ವಾಮಿಗಳ ನಿರ್ಧಾರಕ್ಕೆ ತಲೆ ಬಾಗುತ್ತೇವೆ ಎಂದು ಸ್ಥಿರತೆ ಕಾಯ್ದುಕೊಂಡಿದ್ದರು. ಆದರೆ ಕಾಂಗ್ರೆಸ್ ಹೆಚ್ಚಿನ ಉತ್ಸಾಹ ತೋರಿಸಿದ್ದು, ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಇದನ್ನೂ ಓದಿ; ಕೈ ಶಾಸಕಾಂಗ ಸಭೆಯಲ್ಲಿ ಲಿಂಗಾಯತ ಶಾಸಕರ ಅಸಮಾಧಾನ ಸ್ಫೋಟ!

ಚುನಾವಣೆ ಮುಗಿದ ಬಳಿಕ ಹೊಸ ಸರ್ಕಾರ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಸದ್ಯಕ್ಕೆ ಈಗ ಸಮ್ಮಿಶ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Comments

Leave a Reply

Your email address will not be published. Required fields are marked *