ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

– ನನಗೀಗ ಪರಿಷತ್ ನಲ್ಲಿ ಯೌವ್ವನ ತುಂಬಿದೆ

ಬೆಂಗಳೂರು: ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಎಂದು ಸಿ.ಎಂ.ಇಬ್ರಾಹಿಂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಮತಾಂತರ ನಿಷೇಧ ಮಸೂದೆಯಲ್ಲಿ ಲವ್ ಜಿಹಾದ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದ್ರೀ ಲವ್, ಯಾವುದ್ರೀ ಜಿಹಾದ್? ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಲವ್ ಇರೋದ್ರಿಂದಾನೇ ಮದುವೆ ಆಗೋದು. ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ

ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ ಆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಕೇಸ್ ಇದ್ರೆ ಕ್ರಮ ತಗೊಳ್ಳಲಿ. ಅವರ ತಾಯಿ ದೂರು ಕೊಟ್ರೆ ತನಿಖೆ ಮಾಡಲಿ. ಯಾರು ಬೇಡ ಅಂತಾರೆ? ದೇಶದಲ್ಲಿ ಸಾಕಷ್ಟು ಸಮಸ್ಯೆ ಇದೆ. ಊಟದ ಸಮಸ್ಯೆ, ಕೋವಿಡ್ ಸಮಸ್ಯೆ ಇದೆ. ಹುಚ್ಮುಂಡೆ ಮದುವೇಲಿ ವಾಲಗದೋರು ಬಡಿದಿದ್ರು ಅನ್ನೋ ಹಾಗಾಯ್ತು ಈ ಬಿಜೆಪಿ ಸರ್ಕಾರ ಹೇಳುವುದು. ತಿನ್ನೋಕ್ಕೆ ಅನ್ನ ಇಲ್ಲ, ನಿರುದ್ಯೋಗ ಸಮಸ್ಯೆ ಇದೆ, ರೈತರ ಸಮಸ್ಯೆ ಇದೆ. ಈ ಕುರಿತು ಸರ್ಕಾರ ಮಾತಾಡಬೇಕು. ಮತಾಂತರ ಸರ್ಕಾರದ ಸಮಸ್ಯೆ ಅಲ್ಲ ಎಂದು ಕಿಡಿಕಾರಿದರು.

BJP - CONGRESS

ಈ ರೀತಿಯ ಸಮಸ್ಯೆಯನ್ನು ನೋಡಿಕೊಳ್ಳಲು ಧರ್ಮಗಳು, ಧರ್ಮಗುರುಗಳು ಇದ್ದಾರೆ. ಇದನ್ನೆಲ್ಲ ಅವರು ನೋಡಿಕೊಳ್ತಾರೆ. ಯಾರ್ಯಾರಿಗೆ ಇಚ್ಚೆ ಇದೆಯೋ ಮತಾಂತರ ಆಗ್ತಾರೆ. ಬಲವಂತ ಇದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದರು.

ಪರಿಷತ್ ವಿಪಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, ಯೌವ್ವನದಲ್ಲಿ ಮದುವೆಯಾಗಲ್ಲ ಅಂತ ಹೇಳೋರು ಯಾರಿದ್ದಾರೆ ಹೇಳಿ? ನನಗೀಗ ಪರಿಷತ್ ನಲ್ಲಿ ಯೌವ್ವನ ತುಂಬಿದೆ. ನೋಡೋಣ, ಅದರ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬಿಟ್ಟಿದೀನಿ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಬಳಿ ಈ ವಿಚಾರ ಮಾತಾಡಿದ್ದೀನಿ. ನಿನ್ನೆ ದೆಹಲಿಯಿಂದಲೂ ಕರೆ ಬಂದಿತ್ತು, ಮಾತಾಡಿದ್ದೀನಿ. ಹೈಕಮಾಂಡ್ ಇದರ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತೆ ಅಂತ ಕಾದು ನೋಡ್ತೀನಿ ಎಂದು ವಿಪಕ್ಷ ಸ್ಥಾನದ ಆಸೆಯನ್ನು ತಿಳಿಸಿದರು. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ

ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಈಗಲೂ ವಿಶ್ವಾಸವಿದೆ. ರಾಜಕೀಯ ಬೇರೆ, ವಿಶ್ವಾಸ ಬೇರೆ. ಅಡ್ವಾಣಿ ಮೇಲೆಯೂ ನನಗೆ ವಿಶ್ವಾಸವಿದೆ. ಈಗಲೂ ಅವರ ಮನೆಗೆ ಹೋಗ್ತೇನೆ. ದೇಶ ಉಳಿಸಿ ಅಂತ ಬಿಜೆಪಿ ಸಮಾನ ಮನಸ್ಕರಿಗೂ ನಾನು ಮನವಿ ಮಾಡ್ತೇನೆ. ಇದು ಬಜಾರ್‍ನಲ್ಲಿ ಚರ್ಚೆ ಮಾಡೋ ವಿಚಾರ ಅಲ್ಲ. ಸಂಕ್ರಾಂತಿ ಎಲ್ಲರಿಗೂ ಒಳ್ಳೆದಾಗುತ್ತೆ. ಲೆಟ್ ಅಸ್ ವಿ ವಿಲ್ ಸೀ(ಮುಂದೆ ನೋಡೋಣ) ಕಾಲಾಯ ತಸ್ಮೈ ನಮಃ ಎಂದು ನುಡಿದರು.

ನನಗೆ ಈಗಲೂ ಜೆಡಿಎಸ್ ನಾಯಕರ ಜೊತೆ ವಿಶ್ವಾಸ ಹಾಗೆಯೇ ಇದೆ. ನಾನು ಪಕ್ಷ ಬಿಡ್ತಿದೀನಿ ಅಂತ ಎಲ್ಲಿ ಚರ್ಚೆ ಮಾಡಿದ್ದೀನಿ. ಮಾಧ್ಯಮದವರು ಅದರ ಬಗ್ಗೆ ಚರ್ಚೆ ಮಾಡ್ತಿರೋದು. ಕಾಂಗ್ರೆಸ್ ಪಕ್ಷ ಬಿಡುವ ಮಾತಿಲ್ಲ ಎಂದು ಹೇಳಿದರು.

 

Comments

Leave a Reply

Your email address will not be published. Required fields are marked *