ಕಾಂಗ್ರೆಸ್‍ನ ನಿಗಮ ಮಂಡಳಿ ಆಟಕ್ಕೆ ಶಾಕ್ ನೀಡಿ ವಿದೇಶಕ್ಕೆ ಹಾರಿದ ಸಿಎಂ!

ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್‍ನಲ್ಲಿ ನಿಗಮ ಮಂಡಳಿ ಆಟ ಆರಂಭವಾಗಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ನಡುವೆಯೇ ಶೀತಲ ಸಮರ ಏರ್ಪಟ್ಟಿದೆ. ಈ ಎಲ್ಲ ಗಲಾಟೆಗಳ ನಡುವೆ ಕಾಂಗ್ರೆಸ್ ಸಿದ್ಧಪಡಿಸಿದ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಗೆ ಸಿಎಂ ಸಹಿ ಹಾಕದೇ ಹೊಸ ವರ್ಷಾಚರಣೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಇತ್ತ ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವು ಶಾಸಕ ಕೆ.ಸುಧಾಕರ್ ಕೈ ತಪ್ಪಿದೆ ಎನ್ನುವ ಸುದ್ದಿ ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿದೆ. ಸುಪ್ರೀಂಕೋರ್ಟ್ ಆದೇಶದ ನೆಪವೊಡ್ಡಿ ಸುಧಾಕರ್ ನೇಮಕಾತಿಗೆ ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದೇ ನಿಗಮ ಮಂಡಳಿ ಸ್ಥಾನಕ್ಕೆ ಸಿಎಂ ತಮ್ಮ ಕುಟುಂಬ ಆಪ್ತರಾದ ಪ್ರೊ.ಕೆ.ಎಸ್.ರಂಗಪ್ಪ ನೇಮಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿ ಅಧ್ಯಕ್ಷರ ವಯೋಮಿತಿ 65 ಮೀರುವಂತಿಲ್ಲ. ರಂಗಪ್ಪ ಅವರ ನೇಮಕಾತಿಗಾಗಿ ಮುಂದಿನ ವಾರವೇ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಲು ಮುಂದಾಗಲಿದೆಯಂತೆ. ವಯೋಮಿತಿಯನ್ನು 65ರ 70 ಕ್ಕೆ ಏರಿಸಲು ಸಿಎಂ ಪ್ಲಾನ್ ಮಾಡುವ ಮೂಲಕ ಕಾಂಗ್ರೆಸ್ ಶಾಕ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದು ನನ್ನ ಗಮನಕ್ಕೆ ಅಧಿಕೃತವಾಗಿ ಬಂದಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಮಾಧ್ಯಮ ವರದಿಗಳು ನಿಜ ಎನ್ನುವುದಾದರೆ ನಾನು ಹೈಕಮಾಂಡ್ ಹಾಗೂ ಪಕ್ಷದ ನಾಯಕರ ಬಳಿ ಮಾತನಾಡುತ್ತೇನೆ. ಆದರೆ ಮಾಹಿತಿ ಇಲ್ಲದೇ ನಾನು ಏನೆಂದು ಪ್ರತಿಕ್ರಿಯೆ ನೀಡಲಿ ಎಂದು ಶಾಸಕ ಕೆ.ಸುಧಾಕರ್ ಹೇಳಿದ್ದಾರೆ.

ಇದೇ ವೇಳೆ ತಾಂತ್ರಿಕ ಕಾರಣ ನೆಪ ಹೇಳಿ ನನ್ನ ಹೆಸರನ್ನು ಅಧ್ಯಕ್ಷ ಸ್ಥಾನದಿಂದ ತಪ್ಪಿಸಿದರೆ ನನ್ನ ನಿರ್ಧಾರವನ್ನು ಮಾಡುತ್ತೇನೆ. ಆದರೆ ಏನು ಮಾಡುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕ್ಷೇತ್ರದ ಮಾತದಾರರ ನಿರ್ಧಾರವೇ ಅಂತಿಮವಾಗಲಿದ್ದು, ಉಸ್ತುವಾರಿ ವೇಣುಗೋಪಾಲ್ ಬಳಿ ಮಾತನಾಡಿದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಆದರೆ ನಮ್ಮ ಪಕ್ಷ ಸಿದ್ಧಾಂತವನ್ನು ನಂಬಿ ಬೆಳೆದು ಬಂದಿದೆ. ಆದ್ದರಿಂದ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *