2009ರ ನಂತರದ ಬೆಳೆ ಸಾಲ ಮಾತ್ರ ಮನ್ನಾ- ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: 2009ಕ್ಕಿಂತ ಹಿಂದಿನ ವರ್ಷಗಳಲ್ಲಿ ರೈತರು ಬ್ಯಾಂಕಿನಲ್ಲಿ ಪಡೆದ ಬೆಳೆ ಸಾಲಮನ್ನಾ ಮಾಡುವುದು ಕಷ್ಟ. ಹೀಗಾಗಿ ಅಂತಹ ಸಾಲಕ್ಕೆ ಸರ್ಕಾರ ಯಾವುದೇ ಜವಾಬ್ದಾರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ರೈತ ಜವರೇಗೌಡ ಅವರು 2007ರಲ್ಲಿಯೇ ಬೆಳೆ ಸಾಲ ಪಡೆದಿದ್ದಾರೆ. ಇದರಿಂದಾಗಿ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ನೋಟಿಸ್ ನೀಡಿದೆ. ಈ ಹಿಂದೆಯೂ ಅವರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಯಾವ ಸಾಲಮನ್ನಾ?
2009ರಿಂದ ಇಚೇಗಿನ ಬೆಳೆಸಾಲ ಮಾತ್ರ ಮನ್ನಾ ಆಗುತ್ತದೆ. ಹೊರತಾಗಿ ಟ್ರ್ಯಾಕ್ಟರ್, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಕೃಷಿ ಸಂಬಂಧಿ ಸಾಲಗಳು ಮನ್ನಾ ಆಗುವುದಿಲ್ಲ. ಇದರ ಅನ್ವಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ 2 ಲಕ್ಷ ಸುಸ್ತಿ ಬೆಳೆ ಸಾಲಮನ್ನಾ ಹಾಗೂ ಚಾಲ್ತಿ ಸಾಲವಿರುವ ರೈತರ ಖಾತೆಗೆ 25 ಸಾವಿರ ರೂ. ಜಮೆ ಮಾಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ರೈತರ ಜಾಗೃತಿಗೆ ಕ್ರಮ:
ಸಾಲಮನ್ನಾ ಕುರಿತು ರೈತರಲ್ಲಿ ಅನೇಕ ಗೊಂದಲಗಳಿವೆ. ಈ ಕುರಿತು ನಾನೊಬ್ಬನೇ ಮಾತನಾಡುತ್ತೇನೆ. ಏಕೆಂದರೆ ನಾನಷ್ಟೇ ಜವಾಬ್ದಾರಿ ಹೊತ್ತಿರುವೆ. ಎಲ್ಲ ಸರ್ಕಾರದ ಹಣೆ ಬರವೇ ಇಷ್ಟು ಅಂತಾ ಬೇಸರದಿಂದ ಮಾತು ಆರಂಭಿಸಿದ ಸಿಎಂ, ರೈತರಲ್ಲಿ ಜಾಗೃತಿ ಮೂಡಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಜೊತೆಗೆ ನಾಡ ಕಚೇರಿಯಲ್ಲಿ ಅರ್ಜಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಮೂಲಕ ರೈತರು ಯಾವ ರೀತಿಯ ಸಾಲ? ಯಾವ ವರ್ಷ? ಎಷ್ಟು ಹಣ ಪಡೆದಿದ್ದಾರೆ? ಎಂದು ಮಾಹಿತಿ ಪಡೆಯಲಾಗುತ್ತದೆ. ಬಳಿಕ ಅವರು ನೀಡಿದ ವಿವರಣೆ ನಮ್ಮ ಸರ್ಕಾರದ ಸಾಲಮನ್ನಾಕ್ಕೆ ಅನ್ವಯವಾಗುತ್ತದೆ ಇಲ್ಲವೋ ಅಂತಾ ನೋಡಿ, ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಲಮನ್ನಾ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲಪಡೆದ ಒಟ್ಟು 22 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಸಾಲಮನ್ನಾ ಫಲಾನುಭವಿ ರೈತರಿಗೆ ನಾನು ಪತ್ರ ಬರೆಯುವ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *