ದೋಸ್ತಿ ಸರ್ಕಾರ ಸೇಫ್ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಸಿಎಂ!

ಬೆಂಗಳೂರು: ದೋಸ್ತಿ ಸರ್ಕಾರವನ್ನು ಸೇಫ್ ಮಾಡಲು ಹೋಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

`ಜೋಡೆತ್ತು’ಗಳ ರೀತಿ ಇದ್ದ ಸಿಎಂ ಮತ್ತು ಸಚಿವ ಡಿಕೆ ಶಿವಕುಮಾರ್ ನಡುವೆ ಸಂಧಾನಕ್ಕೆ ಸಂಬಂಧಿಸಿದಂತೆ ಇದೀಗ ವೈಮನಸ್ಸು ಎದ್ದಿದೆ. ಈ ಮೂಲಕ ಸಂಕಷ್ಟದ ಸಮಯದಲ್ಲಿ ಜೊತೆಯಾಗಿದ್ದ ಡಿಕೆಶಿ ಅವರು ಸಿಎಂ ಮೇಲೆ ಗರಂ ಆದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಸರ್ಕಾರ ಸೇಫ್ ಮಾಡಿಕೊಳ್ಳುವ ಸಲುವಾಗಿ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಮಾಡಲು ಸಿಎಂ ಮುಂದಾಗಿದ್ದಾರೆ. ಆದರೆ ಮುಖ್ಯಮಂತ್ರಿ ಈ ಪ್ರಯತ್ನ ಒಂದು ಹಂತದಲ್ಲಿ ಫಲ ಕೊಟ್ಟರೂ ಆ ಬಳಿಕ ಅದು ಫಲಪ್ರದವಾಗಲಿಲ್ಲ.

ವೈಮನಸ್ಸು ಎದ್ದಿದು ಯಾಕೆ?
ರೆಬೆಲ್ ರಮೇಶ್ ಜಾರಕಿಹೊಳಿಯನ್ನು ಜೆಡಿಎಸ್‍ಗೆ ಸೆಳೆಯಲು ಸಿಎಂ ಮುಂದಾಗಿದ್ದರು. ಕಾಂಗ್ರೆಸ್‍ನಲ್ಲಿ ಇರುಸು ಮುರುಸಾದ್ರೆ ನಮ್ಮ ಜೊತೆ ಬನ್ನಿ ಎಂದು ರಮೇಶ್‍ಗೆ ಹೇಳಲು ಸಿಎಂ ಪ್ಲಾನ್ ಮಾಡಿದ್ದರು. ಆದರೆ ಸಿಎಂ ನಡೆಯನ್ನು ಒಪ್ಪಿಕೊಳ್ಳಲು ಬಿಲ್‍ಕುಲ್ ಸಾಧ್ಯವಿಲ್ಲ ಎಂದು ಸಚಿವ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಮೇಶ್ ಇದ್ದರೆ ಕಾಂಗ್ರೆಸ್‍ನಲ್ಲೇ ಇರಲಿ. ಅವರು ಬಯಸಿದರೆ ಸ್ನೇಹಕ್ಕೂ ಸೈ, ಅಂತರ ಕಾಯ್ದುಕೊಳ್ಳಲು ಸೈ. ರಮೇಶ್ ಹೋಗೋದಾದ್ರೆ ಬಿಜೆಪಿಗೆ ಹೋಗಲಿ. ಆದರೆ ಜೆಡಿಎಸ್ ಜೊತೆ ಗುರುತಿಸಿಕೊಂಡರೆ ಇದನ್ನ ನಾನು ಒಪ್ಪಲ್ಲ. ಜೆಡಿಎಸ್ ರಮೇಶ್‍ಗೆ ಆಶ್ರಯ ಕೊಟ್ಟರೆ ಅದು ಮೈತ್ರಿಗೆ ಮಾಡುವ ದ್ರೋಹವಾಗುತ್ತದೆ. ನನಗೆ ಪಕ್ಷ ಮೊದಲು ಸರ್ಕಾರ ನಂತರ. ನಾವು ಎಷ್ಟೇ ಆತ್ಮೀಯರಾದರೂ ನನಗೆ ಖಾಸಗಿ ಗೆಳೆತನಕ್ಕಿಂತ ಪಕ್ಷವೆ ಮುಖ್ಯ. ಆಮೇಲೆ ನಿಮ್ಮ ಸಂಪುಟದ ಸಚಿವ ಸ್ಥಾನ ಎಂದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಸಿಎಂ ಕುಮಾರಸ್ವಾಮಿಯ ಈ `ಡಬಲ್’ ತಂತ್ರವನ್ನು ನೇರವಾಗಿ ವಿರೋಧಿಸಿದ್ದು, ಇದೀಗ ಸಿಎಂ ಮತ್ತೆ ಟೆನ್ಶನ್ ಆರಂಭವಾಗಿದೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *