ಸಂಜೆ 6 ಗಂಟೆವರೆಗೆ ಕರ್ಫ್ಯೂ ಸಡಿಲಿಕೆ: ಸಿಎಂ ಘೋಷಣೆ

ಮಂಗಳೂರು: ಪೌರತ್ವ ಕಿಚ್ಚನಿಂದ ಮಂಗಳೂರಿನಾದ್ಯಂತ ಪೊಲೀಸರು ಕರ್ಫ್ಯೂವನ್ನು ಜಾರಿ ಮಾಡಿದ್ದರು. ಹೀಗಾಗಿ ಇಂದು ಸಂಜೆ 6 ಗಂಟೆವರೆಗೆ ಕರ್ಫ್ಯೂವನ್ನು ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಜನರು ಕರ್ಫ್ಯೂವನ್ನು ತೆಗೆಯಬೇಕೆಂದು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು 3 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆ ಮಾಡಲಾಗುತ್ತದೆ. ಮತ್ತೆ ಸಂಜೆಯಿಂದ ಕರ್ಫ್ಯೂ ಇರುತ್ತದೆ. ನಾಳೆ ಸಂಜೆವರೆಗೂ ಪೂರ್ಣವಾಗಿ ಕರ್ಫ್ಯೂವನ್ನು ಸಡಿಲ ಮಾಡಲಾಗುತ್ತದೆ. ನಾಳೆ ರಾತ್ರಿ ಮತ್ತೆ ಕರ್ಫ್ಯೂ ಮುಂದುವರಿಯುತ್ತದೆ. ಸೋಮವಾರದಿಂದ ಕರ್ಫ್ಯೂ ಇರುವುದಿಲ್ಲ. ಆದರೆ 144 ಸೆಕ್ಷನ್ ಮಾತ್ರ ಮುಂದುವರಿಯುತ್ತದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದರಿಂದ ಅಹಿತರ ಘಟನೆಗಳು ನಡೆದಿವೆ. ಈ ಬಗ್ಗೆ ಯಾವ ರೀತಿ ತನಿಖೆ ನಡೆಯಬೇಕೆಂದು ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮತ್ತೆ ಕಾನೂನಿನ ಚೌಕಟ್ಟಿನಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ. ಅದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇನೆ. ಅವರೇ ಪರಿಹಾರ ಘೋಷಣೆ ಮಾಡುತ್ತಾರೆ ಎಂದರು.

ನಮ್ಮ ಸರ್ಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಯಾವುದೇ ರೀತಿಯ ಬೇಧಭಾವ ಮಾಡದೆ ಎಲ್ಲಾ ರೀತಿ ಸಹಕಾರ ನೀಡುತ್ತಾ ಬಂದಿದೆ. ಈ ಹಿಂದೆನೂ ಅದೇ ರೀತಿ ನಡೆದುಕೊಂಡಿದ್ದೇವೆ. ಮುಂದೆನೂ ಇದೇ ರೀತಿ ನಡೆದುಕೊಳ್ಳುತ್ತೇವೆ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರೋಣ. ಇದು ಪ್ರಧಾನಿ ಮೋದಿ ಅವರ ಅಪೇಕ್ಷೆ ಕೂಡ ಆಗಿದೆ. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಇರಬೇಕು ಎಂದು ಯುಡಿಯೂರಪ್ಪ ಮನವಿ ಮಾಡಿಕೊಂಡರು.

ಹೀಗಾಗಿ ನಗರದಲ್ಲಿ ಅಂಗಡಿ-ಮುಗ್ಗಟ್ಟುಗಳು ತೆರೆದಿದ್ದು, ಜನರು ಎಂದಿನಂತೆ ದಿನಚರಿಯ ಸಾಮಗ್ರಿಗಳನ್ನ ಕೊಳ್ಳುತ್ತಿದ್ದಾರೆ. ಜೊತೆಗೆ ಬಸ್ ಸಂಚಾರ ಕೂಡ ಆರಂಭವಾಗಿದೆ. ಆದರೆ ಸಂಜೆ 6 ಗಂಟೆವರೆಗೆ ಮಾತ್ರ ಕರ್ಫ್ಯೂವನ್ನು ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಪೊಲೀಸರು ಜನರ ಬಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

 

Comments

Leave a Reply

Your email address will not be published. Required fields are marked *