ಡೋಂಟ್ ವರಿ, ನಾ ಕೈ ಬಿಡಲ್ಲ: ಮಿತ್ರಮಂಡಳಿಗೆ ಬಿಎಸ್‍ವೈ ಸಂದೇಶ

ದಾವೋಸ್: ದಾವೋಸ್‍ನಲ್ಲಿ ಕುಳಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಿತ್ರಮಂಡಳಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ಮಿತ್ರಮಂಡಳಿ ಸದಸ್ಯರಿಗೆ ಸಂದೇಶ ಕಳುಹಿಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಸಂಪುಟ ವಿಸ್ತರಣೆಯು ಜನವರಿ 29ರಂದು ಆಗಲಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಡೋಂಟ್ ವರಿ, ನಾನು ಇದ್ದೇನೆ. ನಿಮ್ಮನ್ನ ಕೈ ಬಿಡಲ್ಲ ಎಂದು ಮಿತ್ರಮಂಡಳಿ ಸದ್ಯರಿಗೆ ಸಿಎಂ ಯಡಿಯೂರಪ್ಪ ಅಭಯ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಒಂದೆಡೆ ದಾವೋಸ್‍ನಲ್ಲಿ ಆರ್ಥಿಕ ಸಮ್ಮೇಳನದಲ್ಲಿ ಉದ್ಯಮಿಗಳ ಜೊತೆಗೆ ಚರ್ಚೆಯಲ್ಲಿ ಬ್ಯುಸಿ. ಇನ್ನೊಂದೆಡೆ ರಾಜ್ಯ ರಾಜಕೀಯದ ಬಗ್ಗೆ ಚಿಂತೆ. ಆದರಲ್ಲೂ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ. ಹೀಗಾಗಿ ಫಾರಿನ್‍ಗೆ ಹೋದರೂ ಸಿಎಂ ಯಡಿಯೂರಪ್ಪ ಅವರಿಗೆ ಬಿಸಿ ತಪ್ಪಿಲ್ಲ ಎನ್ನಲಾಗಿದೆ. ದಾವೋಸ್‍ನಲ್ಲೇ ಕುಳಿತು ಮಿತ್ರಮಂಡಳಿ ಸದಸ್ಯರ ಜತೆ ಮಾತನಾಡಿದ್ದಾರೆ ಅನ್ನೋ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ.

ಮೊದಲ ಹಂತದಲ್ಲಿ ಗೆದ್ದ 8ರಿಂದ 9 ಮಂದಿಗಷ್ಟೇ ಸ್ಥಾನ ಸಿಗುವ ಸಾಧ್ಯತೆ ಇದೆ. ಉಳಿದ ಇಬ್ಬರಿಂದ ಮೂವರಿಗೆ ಪ್ರಬಲ ನಿಗಮ ಮಂಡಳಿಗಳನ್ನು ನೀಡಲು ಪ್ಲ್ಯಾನ್ ಮಾಡಿದ್ದಾರಂತೆ. ಜನವರಿ 25ರಂದು ಮಿತ್ರಮಂಡಳಿ ಸದಸ್ಯರ ಮನವೊಲಿಸಲು ಸಿಎಂ ಯಡಿಯೂರಪ್ಪ ರಣತಂತ್ರ ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಅಂದಹಾಗೆ ಇಬ್ಬರು ಕ್ಯಾಬಿನೆಟ್‍ನಿಂದ ದೂರ ಉಳಿದರೆ ಸಂಪುಟ ವಿಸ್ತರಣೆ ಹಾದಿ ಸುಗಮ ಎನ್ನುವ ಲೆಕ್ಕಚಾರ. ಮಿತ್ರಮಂಡಳಿ ಒಪ್ಪಿದರೆ ಬಳಿಕ ಜನವರಿ 27ಕ್ಕೆ ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದ ಜೆ.ಪಿ.ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುವ ಜತೆಗೆ ಸಂಪುಟ ಪಟ್ಟಿಗೂ ಒಪ್ಪಿಗೆ ಪಡೆಯುವ ಉತ್ಸಾಹದಲ್ಲಿ ಸಿಎಂ ಯಡಿಯೂರಪ್ಪ ಇದ್ದಾರಂತೆ. ಹಾಗಾದರೆ ಸಿಎಂ ಯಡಿಯೂರಪ್ಪ ಪ್ಲ್ಯಾನ್‍ಗೆ ಮಿತ್ರಮಂಡಳಿ ಒಪ್ಪುತ್ತಾ? ಸಿಎಂ ಉತ್ಸಾಹಕ್ಕೆ ಹೈಕಮಾಂಡ್ ಜೈ ಎನ್ನುತ್ತಾ? ಎನ್ನುವುದಕ್ಕೆ ಇನ್ನೆರಡು ಮೂರು ದಿನದಲ್ಲಿ ಉತ್ತರ ಸಿಗಲಿದೆ.

Comments

Leave a Reply

Your email address will not be published. Required fields are marked *