ಕಾಂಗ್ರೆಸ್ ಪರ್ಸೆಂಟೇಜ್ ಆರೋಪಕ್ಕೆ ಬಿಜೆಪಿ ಟಕ್ಕರ್ – ಎಲ್ಲ ಕಾಲದ ಟೆಂಡರ್‌ಗಳ ತನಿಖೆಗೆ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೇಳಿಬಂದಿರೋ ಪರ್ಸೆಂಟೇಜ್ ಆರೋಪದ ಬಗ್ಗೆ ಸರ್ಕಾರ ತನಿಖೆಗೆ ಮುಂದಾಗಿದೆ. ಬಿಜೆಪಿ ಆಡಳಿತಾವಧಿಯಲ್ಲದೆ, ಕಾಂಗ್ರೆಸ್ ಆಡಳಿತಾವಧಿಯ ಟೆಂಡರ್ ಪ್ರಕ್ರಿಯೆ ಬಗ್ಗೆಯೂ ತನಿಖೆಗೆ ಸರ್ಕಾರ ನಿರ್ಧರಿಸಿದೆ.

ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರೋದು ಹಾಸ್ಯಾಸ್ಪದ ಎಂದಿದ್ದಾರೆ. ಯಾವ ಅವಧಿಯಲ್ಲಿ ಹೀಗಾಗಿದೆ ಎಂದು ಗುತ್ತಿಗೆದಾರರು ತಿಳಿಸಿಲ್ಲ. ಕಾಂಗ್ರೆಸ್ಸಿಗರೇ ಪರ್ಸೆಂಟೇಜ್ ಜನಕರು. ಅವರ ಕಾಲದಲ್ಲೇ ಇದು ಇದು ಜಾಸ್ತಿ ಆಗಿರೋದು ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅವಧಿಯ ಟೆಂಡರ್ ಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಸಿಎಂ ನೇರ ಎಚ್ಚರಿಕೆ ನೀಡಿದ್ದಾರೆ.

ಸಚಿವ ಗೋವಿಂದ ಕಾರಜೋಳ ಕೂಡ ಎಲ್ಲಾ ಟೆಂಡರ್‍ಗಳ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. 40 ಪರ್ಸೆಂಟ್ ಕಮಿಷನ್ ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಿ ಎಂದು ಸಚಿವ ಬೈರತಿ ಬಸವರಾಜ್ ಸವಾಲ್ ಹಾಕಿದ್ದಾರೆ. ಭ್ರಷ್ಟಾಚಾರದ ತಂದೆ ತಾಯಿ ಕಾಂಗ್ರೆಸ್. ನಾವು ಬಂದ್ಮೇಲೆ ಭ್ರಷ್ಟಾಚಾರವನ್ನೇ ಅಂತ್ಯ ಮಾಡಿದ್ದೇವೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ನಾಯಕರು ಅರ್ಥವಿಲ್ಲದ ಹೇಳಿಕೆ ನೀಡ್ತಿದ್ದಾರೆ: ಬೊಮ್ಮಾಯಿ

ಇಷ್ಟೇ ಅಲ್ಲ ಕಾಂಗ್ರೆಸ್ ನೀಡಿರೋ ದೂರಿಗೆ ಬಿಜೆಪಿ ಟ್ವಿಟ್ಟರ್‍ನಲ್ಲೂ ವ್ಯಂಗ್ಯವಾಡಿದೆ. ಆಧಾರರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೇ ಐಟಿ ದಾಳಿ ವೇಳೆ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬಹುದಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ. ಡಿಕೆಶಿ ಮೇಲೆ ರೇಡ್ ನಡೆದಾಗ ಅವರು ಒಂದಿಷ್ಟು ಕಾಗದ ಹರಿದಿದ್ರು. ಆ ಕಾಗದ ಜೋಡಿಸಿದಾಗ ಅದ್ರಲ್ಲಿ ಎಐಸಿಸಿ, ಎಪಿ, ಆರ್‍ಜಿ, ಎಸ್‍ಜಿ ಎಂಬ ಉಲ್ಲೇಖವಿತ್ತು. ಕೈ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲಾ ಇದೇ ರೀತಿಯ ರಹಸ್ಯಾಕ್ಷರಗಳು ಹೊರಬರುತ್ತವೆ.. ಯಾರಿವರು.. ಸಿದ್ದರಾಮಯ್ಯನವರೇ ಸ್ವಲ್ಪ ವಿವರಿಸಿ ಎಂದು ಬಿಜೆಪಿ ವ್ಯಂಗ್ಯವಾಗಿ ಕೇಳಿದೆ.

Comments

Leave a Reply

Your email address will not be published. Required fields are marked *