ವಾತಾವರಣದಲ್ಲಿ ದಿಢೀರ್ ಬದಲಾವಣೆ- ಹತ್ತಿ, ಮೆಣಸಿನಕಾಯಿ ಬೆಳೆದ ರೈತರಿಗೆ ದಿಗಿಲು

ರಾಯಚೂರು: ರಾಜ್ಯದ ಕೆಲವೆಡೆ ವಾತಾವರಣ ಏಕಾಏಕಿ ದ್ವಂದ್ವ ನಿಲುವು ತಳೆದಿದ್ದು, ರೈತರನ್ನು ಆತಂಕಕ್ಕೆ ಎಡೆಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ವಾತಾವರಣವೂ ಬದಲಾಗಿದೆ. ಬೆಳಗ್ಗೆ ಒಂದು ರೀತಿ ಮಧ್ಯಾಹ್ನ ಇನ್ನೊಂದು ರೀತಿ ರಾತ್ರಿ ಮತ್ತೊಂದು ರೀತಿಯಂತೆ ವಾತಾವರಣ ಬದಲಾಗುತ್ತಿದೆ.

ಬಿಸಿಲನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಈಗ ಬೆಳಗ್ಗೆಯಾದ್ರೆ ಸಾಕು ಮೋಡಗಳಿಂದ ತುಂಬಿ, ಜಿಟಿ ಜಿಟಿ ಮಳೆಗೆ ಸಾಕ್ಷಿಯಾಗುತ್ತಿದೆ. ಗುಮ್ಮಟ ನಗರಿ ವಿಜಯಪುರದಲ್ಲಿಯೂ ಬಿರುಬೇಸಿಗೆಯಲ್ಲಿ ಮಳೆರಾಯ ಬೆಳ್ಳಂಬೆಳಗ್ಗೆ ದರ್ಶನ ಕೊಡುತ್ತಿದ್ದಾನೆ. ಆದರೆ ಮಧ್ಯಾಹ್ನವಾದರೆ ಮತ್ತೆ ಎಂದಿನಂತೆ ಬಿರುಬಿಸಿಲು ಮುಂದುವರಿಯುತ್ತದೆ. ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್‍ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಬೆಳಗ್ಗೆ ಮಾತ್ರ ಮೋಡ, ಜಿಟಿ ಜಿಟಿ ಮಳೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ ಬಿಸಿಲು, ಮತ್ತೆ ರಾತ್ರಿ ಆದ್ರ್ರತೆಯಿಂದ ಶೆಕೆ ಶಕೆ ಎನ್ನುವಂತಾಗಿದೆ.

ಇದಕ್ಕೆಲ್ಲ ವಾತಾವರಣದ ವೈಪರಿತ್ಯವೇ ಕಾರಣ ಎನ್ನಲಾಗುತ್ತಿದೆ. ವಾತಾವರಣದಲ್ಲಿ ತಾಪಾಮಾನ ಹೆಚ್ಚಾಗಿರುವುದರಿಂದ ಆವಿ ಪ್ರಮಾಣ ಹೆಚ್ಚಾಗಿ ಬಿಸಿಲು ಹೆಚ್ಚು ಇರುವ ಪ್ರದೇಶದಲ್ಲಿ ದಟ್ಟ ಮೋಡ ಆವರಿಸಿ ಅಲ್ಪ ಪ್ರಮಾಣದ ಮಳೆ ಬರುತ್ತಿದೆ. ಇದು ತಾತ್ಕಾಲಿಕ ವಾತಾವರಣ ಬದಲಾವಣೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಈ ವಾತಾವರಣ ಸೂರ್ಯಕಾಂತಿ, ಭತ್ತ ಬೆಳೆಗೆ ಉತ್ತಮ ಸಹ ಹೌದಾಗಿದೆ.

ಆದರೆ ವಾತಾವರಣದ ಧಿಡೀರ್ ಬದಲಾವಣೆ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಾರರಲ್ಲಿ ಭಾರೀ ಆತಂಕ ಸೃಷ್ಠಿ ಮಾಡಿದೆ. ಕಟಾವಿಗೆ ಬಂದ ಮೆಣಸಿನಕಾಯಿ, ಮಳೆ ಬಂದರೆ ಸಂಪೂರ್ಣ ಹಾನಿಯಾಗುವ ಭೀತಿಯಿದೆ. ಈಗಾಗಲೇ ಕಟಾವು ಮಾಡಿ ಜಮೀನುಗಳಲ್ಲಿ ಮೆಣಸಿನಕಾಯಿ ಒಣಗಲು ಬಿಟ್ಟ ರೈತರಿಗೂ ವಾತಾವರಣದ ಭಯ ಶುರುವಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ಸಹ ಗುಣಮಟ್ಟ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಸರ್ಕಾರ ಖರೀದಿ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಉತ್ತಮ ಬೆಳೆಯಿಂದ ಲಾಭದ ನಿರೀಕ್ಷೆಯಲ್ಲಿರುವ ರೈತರನ್ನು ಬದಲಾಗುತ್ತಿರುವ ವಾತಾವರಣ ಆತಂಕಕ್ಕೀಡು ಮಾಡಿದೆ. ಫಸಲು ಕೈಗೆ ಬಂದು ಮಾರಾಟವಾಗುವವರೆಗೆ ಮಳೆ ಬಾರದಿದ್ದರೆ ಸಾಕು ಎಂದು ರೈತರು ಉಸಿರು ಬಿಗಿಹಿಡಿದಿದ್ದಾರೆ. ಸರ್ಕಾರ ಸಹ ಖರೀದಿ ಕೇಂದ್ರಗಳಲ್ಲಿ ಚುರುಕಾಗಿ ರೈತರ ಬೆಳೆಗಳನ್ನು ಖರೀದಿಸಬೇಕಿದೆ.

Comments

Leave a Reply

Your email address will not be published. Required fields are marked *