ಸಿನೆಮಾ ಸ್ಟೈಲಲ್ಲಿ ದರೋಡೆ – ಅಡ್ಡ ಬಂದ ಸೆಕ್ಯೂರಿಟಿ ಗಾರ್ಡ್ ಕೈ ಬೆರಳುಗಳನ್ನೇ ಕಟ್ ಮಾಡಿದ್ರು!

ಚಿಕ್ಕಬಳ್ಳಾಪುರ: ಮಾರಕಾಸ್ತ್ರಗಳನ್ನ ಕೈಯಲ್ಲಿ ಹಿಡಿದು ಸಿನಿಮೀಯ ರೀತಿಯಲ್ಲಿ ಚೆಮ್ಮನೂರ್ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿದ ದರೋಡೆಕೋರರು ಕೈಗೆ ಸಿಕ್ಕಷ್ಟು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರೋ ಘಟನೆ ಚಿಕ್ಕಬಳ್ಳಾಪುರದ ಬೀದಿ ರಸ್ತೆಯಲ್ಲಿ ನಡೆದಿದೆ.

ನಗರದ ಬೆಂಗಳೂರು ರಸ್ತೆಯಲ್ಲಿರುವ ಚೆಮ್ಮನೂರು ಜ್ಯುವೆಲ್ಲರ್ಸ್ ಶಾಪ್ ಗೆ ಸಂಜೆ 6.40ರ ಸುಮಾರಿಗೆ ಹೆಲ್ಮೆಟ್ ಧರಿಸಿ, ಬೈಕ್ ನಲ್ಲಿ ಬಂದ ಮೂವರು ದರೋಡೆಕೋರರು ಏಕಾಏಕಿ ಒಳನುಗ್ಗಿದ್ದಾರೆ.

ಒಳ ನುಗ್ಗುತ್ತಿದ್ದಂತೆ ಮೊದಲು ಹೊಗೆ ಬರುವ ಶೆಲ್ ಎಸೆದು ಜ್ಯುವೆಲ್ಲರಿ ಶಾಪ್ ತುಂಬೆಲ್ಲಾ ಹೊಗೆ ಆವರಿಸುವ ಹಾಗೆ ಮಾಡಿದ್ದಾರೆ. ದರೋಡೆಕೋರರಿಗೆ ಪ್ರತಿರೋಧ ತೋರಿದ ಸೆಕ್ಯೂರಿಟಿ ಗಾರ್ಡ್ ಅಶ್ವತ್ಥಪ್ಪ ನಿಗೆ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ನಿವೃತ್ತ ಯೋಧರೂ ಆಗಿರುವ ಅಶ್ವತ್ಥನಾರಾಯಣಪ್ಪ ಅವರ ಬೆರಳುಗಳು ಸಂಪೂರ್ಣ ಕಟ್ ಆಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ದರೋಡೆಕೋರರು ಕೈಗೆ ಸಿಕ್ಕಷ್ಟು ಚಿನ್ನಾಭರಣ ದೋಚಿಕೊಂಡು, ಕೊನೆಗೆ ಸೆಕ್ಯೂರಿಟಿ ಗಾರ್ಡ್ ಬಳಿ ಇದ್ದ ಗನ್ ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪ್ರಭಾರಿ ಎಸ್ಪಿ ಲೋಕೇಶ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಸಿಬ್ಬಂದಿಯನ್ನು ಒಳಗೆ ಕರೆದು ಎಷ್ಟು ಆಭರಣಗಳು ದರೋಡೆಯಾಗಿವೆ ಎಂದು ಲೆಕ್ಕ ಹಾಕುತ್ತಿದ್ದಾರೆ.

ಸುಮಾರು 1 ವರ್ಷ ಹಿಂದೆಯೂ ಇದೇ ರೀತಿ ದರೋಡೆ ಮಾಡುವ ಯತ್ನ ನಡೆದಿತ್ತು.

Comments

Leave a Reply

Your email address will not be published. Required fields are marked *