ಸಿಐಡಿ ಅಧಿಕಾರಿಗಳಿಂದ ರಾಹುಲ್ ದ್ರಾವಿಡ್ ಅಕೌಂಟ್ ಫ್ರೀಜ್

ಬೆಂಗಳೂರು: ವಿಕ್ರಮ್ ಇನ್ವೆಸ್ಟ್‌ಮೆಂಟ್‌ ನಲ್ಲಿ ಹೂಡಿಕೆ ಮಾಡಿದ್ದ ಭಾರತದ ಕ್ರಿಕೆಟ್ ವಾಲ್ ರಾಹುಲ್ ದ್ರಾವಿಡ್ ಅವರ ಖಾತೆಗಳನ್ನು ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.

ಹೌದು. ವಿಕ್ರಮ್ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡಿದ್ದ ರಾಹುಲ್ ದ್ರಾವಿಡ್ ಅವರು ಹೂಡಿಕೆಗಿಂತ ಮೂರು ಪಟ್ಟು ಹೆಚ್ಚು ಲಾಭ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ದ್ರಾವಿಡ್ ಅವರಿಗೆ ಸಂಬಂಧಿಸಿದ ಎರಡು ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ.

ಸಿಐಡಿ ಅಧಿಕಾರಿಗಳ ಮಾಹಿತಿ ಪ್ರಕಾರ, ವಿಕ್ರಮ್ ಇನ್ವೆಸ್ಟರ್ಸ್ ಕಂಪನಿ ನೋಂದಾಯಿತ ಕಂಪನಿಯಾಗಿರಲಿಲ್ಲ. ಅಲ್ಲದೇ ಹೂಡಿಕೆದಾರರಿಗೆ ಲಾಭಾಂಶವೂ ಹಿಂದಿರುಗುವುದಿಲ್ಲ. ಹೀಗಾಗಿ ಉಳಿದ ಸಂತ್ರಸ್ತರಿಗೆ ಹಣವನ್ನು ನೀಡುವ ಸಲುವಾಗಿ ಅಕೌಂಟ್ ಫ್ರೀಜ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ತಂದೆ ಪ್ರಕಾಶ್ ಪಡುಕೋಣೆಯವರ ಅಕೌಂಟ್‍ಗಳನ್ನು ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದರು. ಇದುವರೆಗೂ ಹೂಡಿಕೆಗಿಂತ ಮೂರು ಪಟ್ಟು ಲಾಭ ಪಡೆದ 280 ಖಾತೆಗಳನ್ನು ಸಹ ಸಿಐಡಿ ಫ್ರೀಜ್ ಮಾಡಿದೆ.

ಬನಶಂಕರಿ ಪೊಲೀಸ್ ಠಾಣೆಯಲ್ಲಿ ವಿಕ್ರಮ್ ಇನ್ವೆಸ್ಟ್‌ಮೆಂಟ್‌ ವಂಚನೆ ಪ್ರಕರಣದ ದೂರು ದಾಖಲಾಗಿತ್ತು. ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸುತ್ತಿರುವ ಸಿಐಡಿ ಸಂಸ್ಥೆಯು ಸೂತ್ರಂ ಸುರೇಶ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *