ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

ಚಿಕ್ಕಮಗಳೂರು/ಚಿತ್ರದುರ್ಗ/ಕೋಲಾರ: ಮೇ 4ರಿಂದ ರಾಜ್ಯದ ಹಲವು ಭಾಗದಲ್ಲಿ ಲಾಕ್‍ಡೌನ್ ಸಡಿಲಿಕೆಗೊಳಿಸಿ ಮದ್ಯ ಮಾರಾಟಕ್ಕೆ ಷರತ್ತು ವಿಧಿಸಿ ಅವಕಾಶ ನೀಡಲಾಗಿದೆ. ಇಷ್ಟು ದಿನ ಎಣ್ಣೆ ಇಲ್ಲದೇ ನಿರಾಶೆಗೆ ಒಳಗಾಗಿದ್ದ ಮದ್ಯಪ್ರಿಯರು ನಾಳೆ ಮದ್ಯದಂಗಡಿ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ ಕೋಲಾರದಲ್ಲಿ ಮದ್ಯಪ್ರಿಯನೋರ್ವ ಅಂಗಡಿಗೆ ಬಾಗಿಲು ತೆರೆಯುವ ಮುನ್ನವೇ ಆರತಿ ಎತ್ತಿ ಪೂಜೆ ಮಾಡಿ, ಕಾಯಿ ಒಡೆದು ಖುಷಿಪಟ್ಟಿದ್ದಾನೆ.

ಸೋಮವಾರ ಬಾರ್ ಓಪನ್ ಆಗುವ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಮದ್ಯಪ್ರಿಯನೊಬ್ಬ ಬಾರ್ ಬಾಗಿಲಿಗೆ ಮಂಗಳಾರತಿ ಮಾಡಿ, ಕಾಯಿ ಒಡೆದು ಪೂಜೆ ಮಾಡಿದ್ದಾನೆ. ಬೂದಿಕೋಟೆ ಗ್ರಾಮದಲ್ಲಿನ ಎಂಎಸ್‍ಐಎಲ್ ಶಾಪ್‍ಗೆ ಪೂಜೆ ಮಾಡಿ ಖುಷಿಪಟ್ಟಿದ್ದಾನೆ. ಇತ್ತ ಮತ್ತೊಂದೆಡೆ ಬೇತಮಂಗಲದಲ್ಲಿ ಲೈಟಿಂಗ್ ಹಾಕಿಸಿ ಅಲಂಕಾರ ಮಾಡಿ ಮದ್ಯಅಂಗಡಿ ಓಪನ್‍ಗೆ ಭರ್ಜರಿ ಸಿದ್ಧತೆ ನಡೆದಿದೆ.

ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಕುಡುಕರಿಗೆ ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿ, ಲಾಕ್‍ಡೌನ್ ನೋವನ್ನೆಲ್ಲಾ ಮರೆಸಿದೆ. ನಾವು ಬಾಗಿಲು ತೆಗೆಯುವ ಮುನ್ನವೇ ಕುಡುಕರು ಅಂಗಡಿ ಬಾಗಿಲು ಕಾಯ್ತಿರುತ್ತಾರೆ ಎಂದು ಚಿಕ್ಕಮಗಳೂರು ನಗರದ ಮದ್ಯದಂಗಡಿ ಮಾಲೀಕರು ಈಗಾಗಲೇ ಅಂಗಡಿ ಮುಂದೆ ಸಕಲ ಸಿದ್ಧತೆ ಮಾಡ್ಕೊಂಡು, ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಬಾರ್ ಮುಂದೆ ನಾಲ್ಕು ಅಡಿಗೊಂದರಂತೆ ಬಾಕ್ಸ್ ಗಳನ್ನ ಹಾಕಿದ್ದಾರೆ. ಒಳಬರೋದಕ್ಕೆ ಒಂದು ಮಾರ್ಗ, ಹೊರ ಹೋಗೋದಕ್ಕೆ ಒಂದು ಮಾರ್ಗದಂತೆ ಎಲ್ಲಾ ಸಿದ್ಧತೆ ಮಾಡಿದ್ದಾರೆ. ಒಬ್ಬರಿಗೆ ಕೇವಲ ಎರಡೂವರೆ ಲೀಟರ್ ಅಂದ್ರೆ ಸುಮಾರು ಮೂರು ಫುಲ್ ಬಾಟಲಿಯಷ್ಟು ಮದ್ಯ ನೀಡಲು ನಿರ್ಧರಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮದ್ಯದ ಅಂಗಡಿ ಬಾಗಿಲು ತೆರಿದಿರಲಿದೆ.

ಈ ಮಧ್ಯೆ ಎಣ್ಣೆ ಅಂಗಡಿ ಸೀಜ್ ಮಾಡಿದ್ದ ಅಧಿಕಾರಿಗಳು ಸ್ಟಾಕ್ ಚೆಕ್ ಮಾಡ್ತಿದ್ರೆ ರಸ್ತೆಯಲ್ಲಿ ಓಡಾಡುತ್ತಿದ್ದ ಮಂದಿ ಬಂದು ಅಣ್ಣಾ ಎಣ್ಣೆ ಕೊಡ್ತೀರಾ ಅಂತ ಕೇಳ್ತಿದ್ದಾರೆ. ಕಾಫಿನಾಡಲ್ಲಿ ಕಳೆದ 15 ದಿನದಿಂದ ದಿನಬಿಟ್ಟು ದಿನ ಮಳೆಯಾಗ್ತಿದೆ. ಈಗ ಜೊತೆಗೆ ಎಣ್ಣೆ ಕೂಡ ಸಿಗ್ತಿರೋದು ಕಾಫಿನಾಡಿನ ಮದ್ಯಪ್ರಿಯರಿಗೆ ಖುಷಿ ಮೇಲೆ ಖುಷಿಕೊಟ್ಟಿದೆ.

ಇತ್ತ ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯದಂಗಡಿ ತೆರೆಯಲು ಮಾಲಿಕರು ಬರದ ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ಕೋಟೆನಾಡಿನ ಮದ್ಯಪ್ರಿಯರಲ್ಲಿ ಬಾರಿ ಸಂತಸ ಮನೆ ಮಾಡಿದೆ. ಜಿಲ್ಲೆಯಲ್ಲಿ 20 ಎಂಎಸ್‍ಐಎಲ್ ಸೇರಿದಂತೆ ಒಟ್ಟು 97 ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಆದರೆ ಒಬ್ಬರಿಗೆ ಕೇವಲ ಎರಡು ಫುಲ್ ಬಾಟಲಿ ಮದ್ಯವನ್ನು ಮಾತ್ರ ನೀಡಲು ನಿಗಧಿಪಡಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಅಂಗಡಿ ಬಳಿ ಬ್ಯಾರಿಕೇಡ್ ಹಾಕಲಾಗಿದ್ದು, ಅಂಗಡಿ ಬಳಿ ಸರದಿ ಸಾಲಿನಲ್ಲಿ ಮದ್ಯ ಪ್ರಿಯರು ಬರುವಂತೆ ಸೂಚಿಸಲಾಗಿದೆ.

ಅಲ್ಲದೇ ಅಂಗಡಿ ಮುಂದೆ ಐದಕ್ಕೂ ಹೆಚ್ಚು ಜನ ಸೇರದಂತೆ ನಿರ್ಭಂಧಿಸಲು ಅಬಕಾರಿ ಇಲಾಖೆ ಮಾಲೀಕರಿಗೆ ಸೂಚನೆ ನೀಡಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಮತ್ತು ಎಲ್ಲರು ಮಾಸ್ಕ್ ಹಾಗು ಸ್ಯಾನಿಟೈಸರ್ ಬಳಸಬೇಕೆಂಬ ಸೂಚನೆ ಸಹ ಅಬಕಾರಿ ಇಲಾಖೆ ಉಪ ಆಯುಕ್ತೆ ನಿರ್ಮಲಾ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳ ಬಳಿ ಪೊಲೀಸರು ಬಿಗಿ ಭದ್ರತೆ ಒದಗಿಸಲು ಸಜ್ಜಾಗಿದ್ದಾರೆ.

Comments

Leave a Reply

Your email address will not be published. Required fields are marked *