ಏಸ್ ಟಾಪ್ ಮೇಲೆ ಮಕ್ಕಳು – ಮಂಡ್ಯ ಬಳಿಕ ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾ ಸಾರಿಗೆ ಇಲಾಖೆ?

ದಾವಣಗೆರೆ: ಮಂಡ್ಯ ದುರಂತದ ನೋವು ಮಾಸುವ ಮುನ್ನವೇ ದಾವಣಗೆರೆಯಲ್ಲಿ ಭಯವಿಲ್ಲದೆ ಆಟೋಗಳಲ್ಲಿ ಸಾಮಥ್ರ್ಯಕಿಂತ ಹೆಚ್ಚಿನ ಸಂಖ್ಯೆಯ ಜನರನ್ನು ತುಂಬಿಕೊಂಡು ರಿಕ್ಷಾ ಚಾಲಕರು ತಮ್ಮದೆ ದರ್ಬಾರ್ ನಡೆಸುತ್ತಿದ್ದಾರೆ.

ದಾವಣಗೆರೆ ತಾಲೂಕಿನ ರಾಮನಗರ, ಲೋಕಿಕೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಆಟೋಗಳೇ ಸಂಪರ್ಕ ಸೇತುವೆ. ಇದನ್ನೇ ಲಾಭ ಮಾಡಿಕೊಂಡ ಚಾಲಕರು ಆಟೋದಲ್ಲಿ ಅಧಿಕ ಜನರನ್ನು ಸಾಗಿಸುತ್ತಿದ್ದಾರೆ. ಅಲ್ಲದೆ ಯಾವುದೇ ಪರವಾನಿಗೆ ಇಲ್ಲದೆ ಆಟೋಗಳನ್ನು ಚಲಾಯಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕೆಲ ತಿಂಗಳುಗಳ ಹಿಂದೆ ಚಲಿಸುತ್ತಿದ್ದ ಆಟೋದಿಂದ ಬಿದ್ದು ಇಬ್ಬರು ಶಾಲಾ ಮಕ್ಕಳು ಸಾವನ್ನಪ್ಪಿದ್ದರು. ಆದರಿಂದ ಆಟೋಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

ಲೋಕಿಕೆರೆ ಗ್ರಾಮದ ಆಟೋಗಳಲ್ಲಿ ಪ್ರಯಾಣಿಸುತ್ತಿದ್ದ ಶಾಲಾ, ಕಾಲೇಜು ಮಕ್ಕಳು ವಾಹನದ ಹಿಂದೆ ನೇತುಬಿದ್ದು ಸರ್ಕಸ್ ಮಾಡುತ್ತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಟಾಟಾ ಏಸ್ ಗಾಡಿಯಲ್ಲಿ ಟಾಪ್ ಮೇಲೆ ಕೂತು ಮಕ್ಕಳು ಪ್ರಯಾಣ ಬೆಳಸುತ್ತಿದ್ದು, ಸ್ವಲ್ಪ ಹೆಚ್ಚುಕಮ್ಮಿಯಾದರೂ ಜವರಾಯನ ಕದ ತಟ್ಟೊದಂತು ಗ್ಯಾರೆಂಟಿ.

ಸಾರಿಗೆ ಇಲಾಖೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸು ಸೇವೆಯನ್ನು ರದ್ದುಗೊಳಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು 10, 15 ಜನರನ್ನೂ ಕೂರಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದಾರೆ.

ಜಿಲ್ಲಾದ್ಯಂತ ಅವಧಿ ಮುಗಿದ ಖಾಸಗಿ ಬಸ್‍ಗಳು ಸಂಚಾರ ಮಾಡುತ್ತಿದ್ದು, ಬಸ್ ಟಾಪ್ ಮೇಲೆ ಪ್ರಯಾಣಿಕರು ಕೂತು ಪ್ರಯಾಣಿಸುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *