ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *