ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

ಚಿಕ್ಕಮಗಳೂರು: ನಡು ಮಧ್ಯಾಹ್ನ ರಸ್ತೆ ಮಧ್ಯದಲ್ಲಿ ನಿಂತಿದ್ದ ಪೊಲೀಸ್ ಜೀಪನ್ನೇ ಕಳ್ಳನೋರ್ವ ಕದ್ದು ಅಪಘಾತ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ನಗರದ ಹನುಮಂತಪ್ಪ ವೃತ್ತದ ಬಳಿ ಗ್ರಾಮಾಂತರ ಠಾಣೆಯ ರಕ್ಷಾ ಗಾಡಿಯನ್ನು ನಿಲ್ಲಸಿ ಪೊಲೀಸರು ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಜೀಪ್ ಇದ್ದ ಜಾಗದಲ್ಲಿ ಇರಲಿಲ್ಲ. ಪೊಲೀಸರು ಜೀಪಿನಿಂದ ಇಳಿದು ಹೋಗ್ತಿದ್ದಂತೆ ಅದನ್ನು ಗಮನಿಸುತ್ತಿದ್ದ ಕಳ್ಳ ಜೀಪನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.

ಇದನ್ನು ಗಮನಿಸಿಸ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ನಗರದಿಂದ ಐದು ಕಿ.ಮೀ. ಸಾಗಿದ ಮೇಲೆ ಕಳ್ಳ ಪೊಲೀಸರ ಜೀಪನ್ನು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಗಾಡಿಯ ನಿಯಂತ್ರಣ ಸಿಗದೆ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾನೆ. ಹಿಂದೆ ಪೊಲೀಸರು ಇರುವುದನ್ನು ಗಮನಿಸಿ ಜೀಪನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾನೆ.

ಪೊಲೀಸರ ವಾಹನವನ್ನೇ ಕದ್ದ ಧೈರ್ಯವಂತನಿಗಾಗಿ ಗ್ರಾಮಾಂತರ ಪೊಲೀಸರು ಕಾಡಿನೊಳಗೆ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ.

Comments

Leave a Reply

Your email address will not be published. Required fields are marked *