ತೋಟದಲ್ಲಿದ್ದ ಕಾರ್ಮಿಕರು ಸರ್ಕಾರಿ ಬಸ್ಸಲ್ಲಿ ಸ್ವಂತ ಊರಿಗೆ ಶಿಫ್ಟ್

ಚಿಕ್ಕಮಗಳೂರು: ಕೂಲಿಗಾಗಿ ರಾಜ್ಯದ ಇತರ ಜಿಲ್ಲೆಗಳಿಂದ ಬಂದು ಕೊರೊನಾದಿಂದಾಗಿ ಲಾಕ್‍ಡೌನ್ ಘೋಷಿಸಿದಾಗಿನಿಂದ ಊರಿಗೆ ಹೋಗಲಾಗದೆ ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಜಿಲ್ಲೆಯ ಮೂಡಿಗೆರೆಯಿಂದ ಸರ್ಕಾರಿ ಬಸ್‍ನಲ್ಲಿ ತಮ್ಮ ಊರುಗಳಿಗೆ ಸ್ಥಳಾಂತರಿಸಲಾಗಿದೆ.

 

ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕಾಫಿ ಹಾಗೂ ಮೆಣಸು ಕೊಯ್ಯಲು ಕೂಲಿ ಕಾರ್ಮಿಕರು ಆಗಮಿಸಿದ್ದರು. ಅವರೆಲ್ಲಾ ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ತೋಟದ ಲೈನ್ ಮನೆಗಳಲ್ಲೇ ವಾಸವಿದ್ದರು. ಇಂದು 11 ಬಸ್‍ಗಳ ಮೂಲಕ ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ವಿವಿಧ ಊರುಗಳಿಗೆ 200ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲಾಗಿದೆ.

ಒಂದೊಂದು ಬಸ್‍ನಲ್ಲಿ ಕೇವಲ 21 ಜನ ಮಾತ್ರ ಇದ್ದು. ಎಲ್ಲರಿಗೂ ಮುಖಕ್ಕೆ ಮಾಸ್ಕ್ ಹಾಕಿ ಬಸ್‍ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರನ್ನೂ ತಮ್ಮ-ತಮ್ಮ ಊರುಗಳಿಗೆ ಕಳುಹಿಸಲಾಗಿದೆ. ಏಪ್ರಿಲ್ 25ರಂದು 5 ಬಸ್, 26ರಂದು 7 ಬಸ್ ಹಾಗೂ ಇಂದು ಒಟ್ಟು 11 ಬಸ್‍ಗಳಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ.

ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಹೊರ ಜಿಲ್ಲೆಗಳಿಂದ ಬಂದ ಕೂಲಿಕಾರ್ಮಿಕರು ಕಾಫಿತೋಟದ ಲೈನ್ ಮನೆಗಳಲ್ಲೇ ವಾಸಿವಿದ್ದರು. ಕೆಲ ಕಾರ್ಮಿಕರು ಕದ್ದು ಮುಚ್ಚಿ ಊರಿಗೆ ಹೋಗಲು ಯತ್ನಿಸಿ ಸಿಕ್ಕಿಬಿದ್ದು, ಸರ್ಕಾರದ ನಿರಾಶ್ರಿತ ಘಟಕದ ಪಾಲಾಗಿದ್ದರು. ಆದರೆ ನಿನ್ನೆಯಿಂದ ಸರ್ಕಾರವೇ ಕಾರ್ಮಿಕರನ್ನು ಸ್ವಂತ ಜಿಲ್ಲೆ ಹಾಗೂ ಊರುಗಳಿಗೆ ಕಳುಹಿಸಲು ಮುಂದಾಗಿದೆ.

Comments

Leave a Reply

Your email address will not be published. Required fields are marked *