ಕೈಗೆ ಸೂಜಿ ಚುಚ್ಚಿ, ಸಂಬಂಧಿ ಕೈಗೆ ಗ್ಲೂಕೋಸ್ ಬಾಟಲ್ ಕೊಟ್ಟ ವೈದ್ಯರು

ಚಿಕ್ಕಮಗಳೂರು: ಆಸ್ಪತ್ರೆಗೆ ಬಂದಿದ್ದ ರೋಗಿಗೆ ವೈದ್ಯರು ಡ್ರಿಪ್ ಹಾಕಿ ಆತನ ಸಂಬಂಧಿಯ ಕೈಯಲ್ಲೇ ಗ್ಲೂಕೋಸ್ ಬಾಟಲಿಯನ್ನ ಕೊಟ್ಟು ಕಳುಹಿಸಿರುವ ಅಮಾನವೀಯ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತೀವ್ರ ಜ್ವರ, ಕೈಕಾಲು ನಡುಕ ಹಾಗೂ ಸುಸ್ತು ಎಂದು ಜಿಲ್ಲಾಸ್ಪತ್ರಗೆ ದಾಖಲಾಗಿದ್ದರು. ಆಸ್ಪತ್ರೆಗೆ ಬಂದವರಿಗೆ ಎಮರ್ಜೆನ್ಸಿ ವಾರ್ಡ್ ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ನರ್ಸ್ ಗಳು ಕೈಗೆ ಸೂಜಿ ಚುಚ್ಚಿ ಡ್ರಿಪ್ ಹಾಕಿದ್ದಾರೆ. ಚಿಕಿತ್ಸೆಯ ಬಳಿಕ ಅಡ್ಮಿಟ್ ಆಗಬೇಕೆಂದು ಸೂಚಿಸಿದ್ದಾರೆ. ಬಳಿಕ ವೈದ್ಯರು ರೋಗಿಯ ಸಂಬಂಧಿಯ ಕೈಯಲ್ಲೇ ಡ್ರಿಪ್ ಬಾಟಲಿ ಕೊಟ್ಟು ವಾರ್ಡಿಗೆ ಕಳುಹಿಸಿದ್ದಾರೆ.

ರೋಗಿಗೆ ವ್ಹೀಲ್‍ಚೇರ್ ಅಥವಾ ಸ್ಟ್ರೆಚ್ಚರ್ ಕೂಡ ಕೂಡದೇ ವೈದ್ಯರು ಹಾಗೂ ಸಿಬ್ಬಂದಿ ಕಳಿಸಿದ್ದಾರೆ. ಎಮರ್ಜೆನ್ಸಿ ವಾರ್ಡಿನಿಂದ ಸುಮಾರು ನೂರು ಮೀಟರ್ ದೂರದ ವಾರ್ಡಿಗೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆ ನಡೆದೇ ಹೋಗಿದ್ದು, ಇದನ್ನ ಕಂಡ ಸ್ಥಳೀಯರು ಜಿಲ್ಲಾಸ್ಪತ್ರೆ, ವೈದ್ಯರು ಹಾಗೂ ನರ್ಸ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಇದೇ ಜಿಲ್ಲಾಸ್ಪತ್ರೆಯಲ್ಲಿ ವೃದ್ಧೆಯೊಬ್ಬರಿಗೂ ಕೂಡ ವ್ಹೀಲ್‍ಚೇರ್ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರು ವೃದ್ಧೆಯನ್ನು ಹೊತ್ತುಕೊಂಡೇ ಹೋಗಿದ್ದರು. ಇದನ್ನ ಕಣ್ಣಾರೆ ಕಂಡ ಆಸ್ಪತ್ರೆಯ ಇತರ ರೋಗಿಗಳು ಹಾಗೂ ಸ್ಥಳೀಯರು ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚ್ಚರ್ ಕೂಡ ಇಲ್ವಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *