ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ- ನಾಪತ್ತೆಯಾಗಿದ್ದ ಆರೋಪಿ ಅರೆಸ್ಟ್

ಚಿಕ್ಕಮಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣ ಹಸಿ ಇರುವಾಗಲೇ ಕಾಫಿನಾಡಲ್ಲೂ ಅಂತಹದ್ದೊಂದು ಪ್ರಕರಣ ನಡೆದಿದೆ. ರಸ್ತೆ ಬದಿಯಲ್ಲಿ ಕಸದ ಆಟೋ ನಿಲ್ಲಿಸಿದ್ದರು ಎಂಬ ಕಾರಣಕ್ಕೆ ಏಕಾಏಕಿ ಮಹಿಳೆ ಹಾಗೂ ಪುರುಷ ಪೌರಕಾರ್ಮಿಕರ ಮೇಲೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಉಪ್ಪಳ್ಳಿಯ ಮಸೀದಿ ಸಮೀಪದ ತಮೀಮ್ ಬಂಧಿತ. ಆಟೋದಲ್ಲಿದ್ದ ಮಂಜುನಾಥ್, ಯೇಸು ಹಾಗೂ ಮಹಿಳಾ ಕಾರ್ಮಿಕರ ಮೇಲೂ ತಮೀಮ್ ಹಲ್ಲೆಗೈದಿದ್ದು, ಯೇಸು ಅವರ ಶರ್ಟ್ ಹರಿದು ಹಾಕಿದ್ದ.

ಪೌರ ಕಾರ್ಮಿಕರು ನಗರದ ಉಪ್ಪಳ್ಳಿಯ ಮಸೀದಿ ಬಳಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾಗ, ರಸ್ತೆ ಮಧ್ಯೆ ಆಟೋ ನಿಲ್ಲಿಸಿದ್ದರು. ಈ ವೇಳೆ ತಮೀಮ್ ರಸ್ತೆ ಮಧ್ಯೆ ಆಟೋ ನಿಲ್ಲಿಸ್ತಿರಾ, ನಿಮ್ಮದೆ ನಡೆಯಬೇಕು, ನೀವು ಹೇಳಿದ್ದೆಲ್ಲಾ ಕೇಳಲು ಆಗೋದಿಲ್ಲ ಎಂದು ಹಲ್ಲೆ ಮಾಡಿದ್ದ.

ನನ್ನನ್ನೂ ದೂಡಿ ಹಲ್ಲೆಗೆ ಯತ್ನಿಸಿದ್ದ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಪೌರ ಕಾರ್ಮಿಕ ಮಂಜುನಾಥ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆ ಪೌರ ಕಾರ್ಮಿಕರೆಲ್ಲರೂ ಆಟೋ ಸಮೇತ ಬಸವನಹಳ್ಳಿ ಠಾಣೆ ಬಳಿ ಜಮಾಯಿಸಿ, ಆರೋಪಿ ವಿರುದ್ಧ ದೂರು ನೀಡಿದ್ದರು. ಪೌರ ಕಾರ್ಮಿಕರು ದೂರು ನೀಡುತ್ತಿದ್ದಂತೆ ಆರೋಪಿ ತಮೀಮ್ ನಾಪತ್ತೆಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಸವನಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ತಮೀಮ್‍ಗಾಗಿ ಹುಡುಕಾಟ ನಡೆಸಿ, ಸಂಜೆ ವೇಳೆಗೆ ಬಂಧಿಸಿದ್ದಾರೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Comments

Leave a Reply

Your email address will not be published. Required fields are marked *