ಯುವತಿ ಶವ ಪತ್ತೆ ಪ್ರಕರಣ – ಹಣಕ್ಕಾಗಿ ಕೊಲೆ ಮಾಡಿ ಮೋರಿಗೆ ಎಸೆದಿದ್ರು

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಗೌರಿಬಿದನೂರು-ಗುಡಿಬಂಡೆ ಮಾರ್ಗದ ಮುಖ್ಯರಸ್ತೆ ಮೋರಿಯೊಳಗೆ ಯುವತಿಯ ಶವ ಸಿಕ್ಕ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಯುವತಿಯನ್ನು ಹಣಕ್ಕಾಗಿ ಕ್ಯಾಬ್ ಚಾಲಕ ಸ್ನೇಹಿತನೊಂದಿಗೆ ಕೊಲೆ ಮಾಡಿ ಪರಾರಿಯಾಗಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಮಂಜುನಾಥ್ (25) ಮತ್ತು ಗಣೇಶ ರೆಡ್ಡಿ (28) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ನಿವಾಸಿಗಳಾಗಿದ್ದಾರೆ.

ಏನಿದು ಪ್ರಕರಣ: ಮೃತ ಭಾಗ್ಯ (22) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರಳೂರು ನಾಗೇನಹಳ್ಳಿಯ ನಿವಾಸಿಯಾಗಿದ್ದು, ಈಕೆ ಶ್ರೀ ಕನ್ನಮಂಗಲಪಾಳ್ಯ ಬಳಿಯ ಮನಿ ಟ್ರಾನ್ಸ್ ಫಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಭಾನುವಾರ ಕಚೇರಿಯ 5 ಲಕ್ಷ ಹಣವನ್ನ ದೇವನಹಳ್ಳಿಯ ಕಚೇರಿಗೆ ತೆಗೆದುಕೊಂಡು ಹೋಗುವಾಗ ಭಾಗ್ಯಶ್ರೀ ನಿಗೂಢವಾಗಿ ನಾಪತ್ತೆಯಾಗಿದ್ದರು.

ಬಳಿಕ ಭಾಗ್ಯ ಶ್ರೀ ಮೃತದೇಹ ಬುಧವಾರ ಗೌರಿಬಿದನೂರು-ಗುಡಿಬಂಡೆ ಮಾರ್ಗದ ಮಧ್ಯೆ ಮೋರಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು. ಈ ವೇಳೆ ಯುವತಿಯ ಬಳಿ ಹಣದ ನಾಪತ್ತೆಯಾಗಿದ್ದನ್ನು ಗಮನಿಸಿದ್ದ ಪೊಲೀಸರು ಹಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದರು. ತನಿಖೆ ಸಮಯದಲ್ಲಿ ಹಣ ತೆಗದುಕೊಂಡು ಹೋಗುತ್ತಿದ್ದ ಭಾಗ್ಯರಿಗೆ ಡ್ರಾಪ್ ಮಾಡುವ ನೆಪದಲ್ಲಿ ಆರೋಪಿಗಳು ಕಾರು ಹತ್ತಿಸಿಕೊಂಡು ಕೊಲೆ ಮಾಡಿ ಹಣದೊಂದಿಗೆ ಪರಾರಿಯಾಗಿದ್ದರು.

ಆರೋಪಿಗಳಿಬ್ಬರು ಮೃತ ಭಾಗ್ಯಗಳಿಗೆ ಪರಿಚಿತರಾಗಿದ್ದ ಕಾರಣ ಯುವತಿ ಕಾರು ಹತ್ತಿದ್ದರು. ಹಣ ದೋಚಲು ಮೊದಲೇ ಸಂಚು ರೂಪಿಸಿದ್ದ ಆರೋಪಿಗಳಿಬ್ಬರು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಗೌರಿಬಿದನೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *