ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತು ಹೋಯ್ತು: ಸುಧಾಕರ್

ಚಿಕ್ಕಬಳ್ಳಾಪುರ: ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಪಕ್ಷ ಸತ್ತು ಹೋಯಿತು ಎಂದು ಅನರ್ಹ ಶಾಸಕ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನರ್ಹ ಶಾಸಕ ಸುಧಾಕರ್, ದಿನೇಶ್ ಗುಂಡೂರಾವ್ ಮೊದಲು ಕೆಪಿಸಿಸಿ ಪಕ್ಷದ ಅಧ್ಯಕ್ಷರ ಕೆಲಸ ಮಾಡೋದನ್ನು ಕಲಿತುಕೊಳ್ಳಲಿ. ಲೋಕಸಭಾ ಚುನಾವಣೆಯಲ್ಲಿ 28 ರಿಂದ 1 ಸ್ಥಾನ ಬಂದಾಗ ದಿನೇಶ್ ಗೂಂಡಾರಾವ್ ರಾಜೀನಾಮೆ ಕೊಡಬೇಕಿತ್ತು ಎಂದು ಕಿಡಿಕಾರಿದರು.

ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡಲು ಅವರಿಗೇನು ನೈತಿಕತೆ ಇದೆ. ಯಾವ ನೈತಿಕತೆಯೂ ದಿನೇಶ್ ಗುಂಡೂರಾವ್ ಗಿಲ್ಲ. ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡೋದನ್ನು ಮೊದಲು ಕಲಿತುಕೊಳ್ಳಲಿ. ಪ್ರಕೃತಿ ವಿಕೋಪ ಆದಾಗ ಸಿಎಂ ಯಡಿಯೂರಪ್ಪ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಂತ್ರಿಮಂಡಲ ಜನಪರ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಪರ ಬ್ಯಾಟ್ ಬೀಸಿದರು.

ಯಾವುದೇ ಸರ್ಕಾರದ ಮೌಲ್ಯಮಾಪನ ಮಾಡಲು ಸಮಯ ಬೇಕು. 5 ವರ್ಷ ಇದ್ದ ಸರ್ಕಾರ 129 ರಿಂದ 79 ಸ್ಥಾನ ಬಂತಲ್ಲ ಅದನ್ನು ಮೌಲ್ಯಮಾಪನ ಮಾಡಬಾರದಾ? ಪದಗಳು ಬಳಸಲು ಕನ್ನಡ ಭಾಷೆ ಬಂದರೆ ಸಾಕು. ಆದರೆ ಟೀಕೆ ಟಿಪ್ಪಣಿಗಳನ್ನು ಮಾಡಬೇಕಾದರೆ ಅಂಕಿ ಅಂಶಗಳು ಆಧಾರ ಸಮೇತ ಮಾಡಬೇಕು. ನೂರಕ್ಕೆ ನೂರು ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಅಯ್ಕೆಯಾದ ದಿನವೇ ಕಾಂಗ್ರೆಸ್ ಸತ್ತು ಹೋಯಿತು ಎಂದು ಸುಧಾಕರ್ ವಾಗ್ದಾಳಿ ಮಾಡಿದರು.

Comments

Leave a Reply

Your email address will not be published. Required fields are marked *