ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

ಚಿಕ್ಕಬಳ್ಳಾಪುರ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಮೃತ ಪಟ್ಟಿದ್ದು, ಎರಡು ಮಕ್ಕಳು ತಬ್ಬಲಿಗಳಾದಂತಹ ಘಟನೆ ಚಿಕ್ಕಬಳ್ಳಾಪುರ ಹೊರಲವಯದ ಹೆದ್ದಾರಿಯಲ್ಲಿ ನಡೆದಿದೆ.

ಮೃತ ತಾಯಿಯನ್ನು ಸರಸ್ವತಿ (24) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 3 ವರ್ಷದ ಮಗಳು ದಿವ್ಯಾ ಹಾಗೂ ಒಂದು ವರ್ಷದ ಮಗ ಶಿವಕುಮಾರ್ ಮತ್ತು ಪತಿ ತಾಯಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಅಕ್ರಂದನ ಮುಗಿಲು ಮುಟ್ಟಿದೆ.

ಆಂಧ್ರದ ಆಧೋನಿಯಿಂದ ಕೆಲಸಕ್ಕೆ ಎಂದು ತಾಯಪ್ಪ ಹಾಗೂ ಆಕೆಯ ಮಡದಿ ಸರಸ್ವತಿ ಜೊತೆಗೆ ಮಕ್ಕಳು ಸೇರಿ ತನ್ನದೇ ಎಪಿ 21 ಸಿ ಎಚ್ 1855 ಬೈಕಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕೆ.ಎ 40 ಎಂ 2854 ನಂಬರಿನ ಸ್ವಿಫ್ಟ್ ಡಿಝೈರ್ ಕಾರು ದಿಢೀರ್ ಹೈವೆಗೆ ಎಂಟ್ರಿ ಕೊಟ್ಟು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಸರಸ್ವತಿ ಮೃತಪಟ್ಟಿದ್ದಾರೆ.

ಅದೃಷ್ಟವಶಾತ್ ಬೈಕಿನಲ್ಲಿದ್ದ ತಾಯಪ್ಪ ಹಾಗೂ ಇಬ್ಬರು ಮಕ್ಕಳು ಸಣ್ಣಪುಟ್ಟ ತರುಚಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಸೇರಿದ್ದಾರೆ. ಆದರೆ ಅತ್ತ ಆಸ್ಪತ್ರೆಯಲ್ಲಿ ತಾಯಿಯಿಲ್ಲದೆ ತಬ್ಬಲಿಗಳಾದ ಇಬ್ಬರು ಮಕ್ಕಳನ್ನು ಸಂತೈಸಲಾಗದ ತಾಯಪ್ಪ ಇನ್ನಿಲ್ಲದ ಪರಿತಪಿಸುವಂತಾಗಿದ್ದು ಇದು ನೋಡುಗರ ಕರಳು ಕಿವುಚವಂತಾಗಿದೆ. ಆದರಲ್ಲೂ ಮಗ ಶಿವಕುಮಾರ್ ಚಿಕ್ಕವನಿದ್ದು, ಬಾಟಲಿ ಹಾಲು ಕುಡಿಯದೇ ತಾಯಿ ಎದೆಹಾಲಿಗಾಗಿ ಅಳುತ್ತಿದ್ದನ್ನು ನೋಡಿ ಸ್ಥಳೀಯರು ಕೂಡ ಕಂಬನಿ ಮಿಡಿದಿದ್ದಾರೆ.

ಅಪಘಾತ ಸಂಬಂಧ ಕಾರು ಹಾಗೂ ಬೈಕ್ ಸಮೇತ ಕಾರು ಚಾಲಕನನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಕಾರು ಚಾಲಕ ಮಾಡಿದ ಆ ಒಂದು ಕ್ಷಣದ ಯಡವಟ್ಟಿನಿಂದ ಇಡೀ ಜೀವನವೆಲ್ಲಾ ತಾಯಿಯಿಲ್ಲದೆ ಇಬ್ಬರು ಮಕ್ಕಳು ತಬ್ಬಲಿಗಳಾಗಿ ಬಾಳುವಂತಯಿತಲ್ಲಾ ಅನ್ನೋದೆ ದುರಂತ.

Comments

Leave a Reply

Your email address will not be published. Required fields are marked *