ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

ಸಾಂದರ್ಭಿಕ ಚಿತ್ರ

ರಾಯ್ಪುರ: ಜೀವಂತ ನಾಗರಹಾವಿನ ಬಳಿ ಆಶೀರ್ವಾದಕ್ಕೆಂದು ತೆರಳಿ ತಮ್ಮ 5 ತಿಂಗಳ ಕಂದಮ್ಮನನ್ನು ದಂಪತಿ ಕಳೆದುಕೊಂಡ ಘಟನೆ ಛತ್ತೀಸಘಡದ ರಾಜಾನಂದ್‍ಗಾವ್ ಜಿಲ್ಲೆಯಲ್ಲಿ ನಡೆದಿದೆ.

5 ತಿಂಗಳ ಮಗುವಿನ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಹಾವಾಡಿಗನ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ನಾಗ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದ.

ಹಾವಾಡಿಗನ ಮಾತಿನಂತೆ ಮಗುವಿನ ಪೋಷರು ನಾಗನಪೂಜೆಯನ್ನು ವಿಧಿವಿಧಾನವಾಗಿ ನೆರವೇರಿಸಿದ್ದಾರೆ. ಪೂಜೆ ವೇಳೆ ಹಾವಾಡಿಗ ತನ್ನ ಬಳಿಯಿದ್ದ ನಾಗರಹಾವಿನ ಬಳಿ ಮಗುವನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳುವಂತೆ ಸೂಚಿಸಿದ್ದಾನೆ. ಈತನ ಮಾತನ್ನು ನಂಬಿ ದಂಪತಿ ತಮ್ಮ 5 ತಿಂಗಳ ಮಗುವನ್ನು ನಾಗರಹಾವಿನ ತಲೆ ಬಳಿ ಇಟ್ಟಿದ್ದಾರೆ. ಮಗುವನ್ನು ನೋಡಿದ ಕೂಡಲೇ ನಾಗರಹಾವು ಕಚ್ಚಿದೆ. ಇದರಿಂದ ಗಾಭರಿಗೊಂಡ ಪೋಷಕರು ಹಾವಾಡಿಗನ ಬಳಿ ವಿಚಾರಿಸಿದಾಗ, ಇದು ಹಲ್ಲುಕಿತ್ತ ಹಾವು. ಮಗುವಿಗೆ ಏನು ತೊಂದರೆಯಾಗುವುದಿಲ್ಲವೆಂದು ಹೇಳಿ ಸಮಾಧಾನ ಮಾಡಿದ್ದಾನೆ.

ಇದಾದ 2 ಗಂಟೆ ಬಳಿಕ ಮಗುವಿನ ಉಸಿರಾಟದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗು ಕಳೆದುಕೊಂಡ ಸಿಟ್ಟಿನಿಂದ ಪೋಷಕರು ಹಾವಡಿಗ ಬಿಲ್ಲು ರಾಮ್ ಮಾರ್ಕಮ್ ನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *