ಬೆಂಗಳೂರು: ತಂದೆ ರವಿಬೆಳಗೆರೆ ಅವರಿಗೆ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಹಂತದ ಆರೋಗ್ಯ ಪರೀಕ್ಷೆ ನಡೆದಿರುವುದಿರಂದ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ ಎಂಬುದಾಗಿ ಚೇತನಾ ಬೆಳಗೆರೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಪ್ರಕರಣದ ಕುರಿತು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ಜಗದೀಶ್ ಅವರು ರವಿಬೆಳಗೆರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶ ನೀಡಿದ್ದಾರೆ. ಅಲ್ಲದೇ ಜೈಲಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

ನಮ್ಮ ತಂದೆ ಆನಾರೋಗ್ಯ ಸಮಸ್ಯೆಯಿಂದ ಬಳಸುತ್ತಿದ್ದು, ಈಗಾಗಲೇ ಈ ಕುರಿತು ಚಿಕಿತ್ಸೆಯ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ನ್ಯಾಯಾಲಯದ ಮೂಲಕವೇ ಈ ದಾಖಲೆಗಳನ್ನು ಸರ್ಕಾರಿ ವೈದ್ಯರಿಗೆ ಸಲ್ಲಿಸಲಾಗುತ್ತದೆ. ವೈದ್ಯರು ಸಲ್ಲಿಸುವ ವರದಿಯ ಆಧಾರ ಮೇಲೆ ನಮ್ಮ ಫ್ಯಾಮಿಲಿ ಡಾಕ್ಟರ್ ಅವರ ಮೂಲಕ ಚಿಕಿತ್ಸೆ ನೀಡಬೇಕೇ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೇ ಎಂಬುದನ್ನು ಕಾನೂನು ನಿಯಮಗಳ ಆಧಾರ ಮೇಲೆ ನಿರ್ಧರಿಸಲಾಗುತ್ತದೆ ಎಂದರು.
ಅನಾರೋಗ್ಯ ಸಮಸ್ಯೆ ಇರುವ ಕಾರಣ ನಮ್ಮ ತಂದೆಗೆ ಸೂಕ್ತ ಚಿಕಿತ್ಸೆ ನೀಡಲು ಮಾತ್ರ ನಾವು ಮನವಿ ಮಾಡಿದ್ವಿ. ಆದರೆ ಕೋರ್ಟ್ ಜಾಮೀನು ನೀಡುವುದು, ಬಿಡುವುದು ನಿರ್ಧರಿಸುತ್ತದೆ. ಆದರೆ ನಾವು ನಮ್ಮ ತಂದೆಯ ಆರೋಗ್ಯದ ಕುರಿತು ಚಿಂತೆಗೆ ಒಳಗಾಗಿದ್ದು, ಅವರಿಗೆ ನಿಲ್ಲಲು, ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೋರ್ಟ್ ಮೆಡಿಕಲ್ ಚಿಕಿತ್ಸೆ ನೀಡಲು ಸಮ್ಮತಿ ನೀಡಿರುವುದಕ್ಕೆ ನಮಗೆ ಸಮಾಧಾನ ನೀಡಿದೆ ಎಂದು ತಿಳಿಸಿದರು.

ರವಿಬೆಳಗೆರೆ ಅವರ ಕಾಲಿಗೆ ಗಾಯವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾನುವಾರ ಅವರನ್ನು ವಿಲ್ ಚೇರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಗಾಯವಾಗಿದೆ. ಅವರಿಗೆ ಈಗಾಗಲೇ ಸಕ್ಕರೆ ಕಾಯಿಲೆ ಇರುವುದರಿಂದ ಅದು ಗ್ಯಾಂಗ್ರಿನ್ ಆಗಿ ತಿರುಗುವ ಸಾಧ್ಯತೆಗಳಿವೆ. ಆದ್ದರಿಂದ ಅವರನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕಿದೆ. ಕೋರ್ಟ್ ಗೆ ತೆರಳುವ ವೇಳೆಯೂ ಅವರನ್ನು ನಡೆಸಿಕೊಂಡು ಹೋಗಲಾಗಿದೆ. ಇದರಿಂದ ಅವರ ದೇಹಕ್ಕೆ ಹೆಚ್ಚು ಬಳಲಿಕೆಯಾಗಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದರು.
ಜಾಮೀನು ಅರ್ಜಿ ಸಲ್ಲಿಸುವ ಕುರಿತು ನಮ್ಮ ವಕೀಲರು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಯಾವಾಗ ಸಲ್ಲಿಸುತ್ತಾರೆ ಎಂಬುವುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
https://www.youtube.com/watch?v=0wDpeO8ZHxk
https://www.youtube.com/watch?v=-Eeqo83EKnM










Leave a Reply