ಬೆಂಗ್ಳೂರಿನಲ್ಲಿ ಕೆಮಿಕಲ್ ಸ್ಫೋಟ – ವ್ಯಕ್ತಿಯ ಕಾಲು ಕಟ್

ಬೆಂಗಳೂರು: ಸಿಲಿಕಾನ್ ಸಿಟಿಯ ಆಡುಗೋಡಿಯಲ್ಲಿ ಕೆಮಿಕಲ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯ ಕಾಲು ಕಟ್ ಆಗಿರುವ ಘಟನೆ ನಡೆದಿದೆ.

ಆಂಜಿನಪ್ಪ (50) ಸ್ಫೋಟದಿಂದ ಗಾಯಗೊಂಡಿರುವ ವ್ಯಕಿ. ತಕ್ಷಣ ಗಾಯಾಳು ಆಂಜಿನಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾನೈಟ್ ಕತ್ತರಿಸುವ ಕೆಮಿಕಲ್ ರಿಯಾಕ್ಷನ್‍ನಿಂದ ಸ್ಫೋಟಗೊಂಡಿರುವುದು ತಿಳಿದು ಬಂದಿದೆ.

ಕಿಡಿಗೇಡಿಗಳು ನಿರ್ಮಾಣ ಹಂತದ ಕಟ್ಟಡದ ಪಕ್ಕ ಇದ್ದ ಕಸದಲ್ಲಿ ಕವರ್‌ಗೆ ಕಟ್ಟಿ ಕೆಮಿಕಲ್ ಎಸೆದು ಹೋಗಿದ್ದರು. ಹೀಗಾಗಿ ಬಿಸಲಿನ ತಾಪಕ್ಕೆ ಕೆಮಿಕಲ್ ರಿಯಾಕ್ಷನ್‍ನಿಂದಾಗಿ ಸ್ಫೋಟಗೊಂಡಿದೆ. ರಿಯಾಕ್ಷನ್ ಆಗಿ ಸ್ಫೋಟಗೊಂಡ ಕೆಮಿಕಲ್ ಯಾವುದು? ಹಾಗೂ ಕೆಮಿಕಲ್ ಯಾವ ಕಾರಣಕ್ಕೆ ತಂದು ಎಸೆಯಲಾಗಿದೆ ಎಂಬುದರ ಬಗ್ಗೆ ಸ್ಥಳದಲ್ಲಿ ಎಫ್‍ಎಸ್‍ಎಲ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ರಂಗದಾಸಪ್ಪ ಲೇಔಟ್‍ನಲ್ಲಿ ಖಾಲಿ ಸೈಟ್‍ನಲ್ಲಿ ಕಸದ ರಾಶಿ ಇದೆ. ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್ ಕಸದೊಳಕ್ಕೆ ಎಸೆಯಲಾಗಿತ್ತು. ಕೆಮಿಕಲ್ ರಿಯಾಕ್ಷನ್‍ನಿಂದ ಸ್ಪೋಟ ಸಂಭವಿಸಿದೆ. ವ್ಯಕ್ತಿಯ ಕಾಲಿಗೆ ಗಾಯವಾಗಿದೆ. ಬೆಂಕಿ ಹೊತ್ತಿಕೊಂಡಿಲ್ಲ, ಪಕ್ಕದಲ್ಲಿದ್ದ ಆಟೋಗೂ ಸಹ ಬೆಂಕಿ ತಗುಲಿಲ್ಲ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಕೂಡ ಭೇಟಿ ನೀಡಿ ಪರಿಶೀಲನ ನಡೆಸುತ್ತಿದೆ ಎಂದು ಡಿಸಿಪಿ ಶ್ರೀನಾಥ್ ಜೋಶಿ ಹೇಳಿದರು.

ಕೆಮಿಕಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಟ್ವೀಟ್ ಮಾಡಿದ್ದಾರೆ. “ಆಡುಗೋಡಿಯಲ್ಲಿ ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್‍ನಿಂದಾಗಿ ಸಣ್ಣ ಪ್ರಮಾಣದ ಸ್ಫೋಟವಾಗಿದೆ. ಇದರಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *