ನಾಯಿ ತಿನ್ನುವ ಆಸೆಯಿಂದ ಚನ್ನರಾಯಪಟ್ಟಣದಲ್ಲಿ ಬೋನಿಗೆ ಬಿತ್ತು ಭಾರೀ ಗಾತ್ರದ ಚಿರತೆ

ಹಾಸನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾರೀ ಗಾತ್ರದ ಚಿರತೆಯೊಂದು ಸೆರೆಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಕೆಲ ದಿನಗಳಿಂದ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಗ್ರಾಮದ ಎರಡು ಕುರಿಗಳನ್ನು ಚಿರತೆ ತಿಂದು ಹಾಕಿ ಹಸುವಿನ ಮೇಲೆ ದಾಳಿ ಮಾಡಿತ್ತು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕದಲ್ಲಿ ಇದ್ದರು. ನಂತರ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಬಳಿ ಮನವಿ ಮಾಡಿಕೊಂಡಿದ್ದರು.

ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನನ್ನು ಇಟ್ಟಿದ್ದರು. ಆದರೆ 2-3 ದಿನಗಳಾದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ನಂತರ ಅರಣ್ಯ ಇಲಾಖೆ ಉಪಾಯದಿಂದ ಸೆರೆ ಹಿಡಿಯಬೇಕೆಂದು ಒಂದು ನಾಯಿಯನ್ನು 2 ದಿನಗಳ ಹಿಂದೆ ಬೋನಿನಲ್ಲಿ ಹಾಕಿದ್ದಾರೆ. ಬಳಿಕ ಇಂದು ಬೆಳಿಗ್ಗೆ ನಾಯಿ ತಿನ್ನುವ ಆಸೆಯಿಂದ ಭಾರಿ ಗಾತ್ರದ ಗಂಡು ಚಿರತೆಯೊಂದು ಬೋನಿಗೆ ಬಂದು ಸೆರೆಯಾಗಿದೆ.

ಸದ್ಯಕ್ಕೆ ಅರಣ್ಯ ಇಲಾಖೆ ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿ ದಟ್ಟ ಕಾಡು ಪ್ರದೇಶಕ್ಕೆ ತಲುಪಿಸಲು ಮುಂದಾಗಿದ್ದು, ಚಿರತೆ ಸೆರೆಯಿಂದಾಗಿ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *