ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

-ಮಹಿಳೆಯರಿಂದಲೇ ಎಳೆಯಲ್ಪಡುವ ದುರ್ಗಮ್ಮಾದೇವಿ ತೇರು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇಅಂತರಗಂಗೆ ಗ್ರಾಮದಲ್ಲಿ ದುರ್ಗಮ್ಮ ದೇವಿ ಜಾತ್ರೆ ವೇಳೆ ತೇರಿನ ಗಾಲಿ ಹರಿದು ಮೂರು ಜನ ಭಕ್ತರ ಕಾಲು ಮುರಿದಿವೆ.

ಈರಮ್ಮ, ಸುನಿತಾ, ಈರಮ್ಮ ಕಾಲು ಮುರಿದು ತೀವ್ರ ಗಾಯಗೊಂಡಿರುವ ಮಹಿಳೆಯರು. ಹೊಸದಾಗಿ ನಿರ್ಮಿಸಿದ್ದ ತೇರನ್ನ ಜಾತ್ರೆಯ ನಿಮಿತ್ತ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು ರಥದ ಚಕ್ರಕ್ಕೆ ಸಿಲುಕಿದ್ದಾರೆ.

ಹಿಂದಿನಿಂದಲೂ ಮಹಿಳೆಯರಿಂದಲೇ ನಡೆಯುತ್ತಿರುವ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುತ್ತಾರೆ. ದುರಾದೃಷ್ಠವಶಾತ್ ಈ ಬಾರಿ ಮೂವರು ಮಹಿಳೆಯರು ಕಾಲು ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *