ಸಂಕಷ್ಟದಲ್ಲಿದ್ದ ರೈತನ ಮನೆಗೆ ತೆರಳಿ, ಹೊಲ ಉತ್ತು ನೆರವು ನೀಡಿದ ಎಂಎಲ್‍ಸಿ ಗೋಪಾಲಸ್ವಾಮಿ

ಹಾಸನ: ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರು ಸಂಕಷ್ಟದಲ್ಲಿದ್ದ ರೈತನ ಮನೆಗೆ ತೆರಳಿ ಹೊಲ ಉತ್ತು ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ದಡದಳ್ಳಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಮೇವಿಲ್ಲದೆ ಸಾಯುತ್ತಿದ್ದ ಮೇಕೆಗಳನ್ನು ನೋಡಿ ಕಂಗೆಟ್ಟಿದ್ದ ರೈತ ಕುಟುಂಬದ ಬಳಿ ತೆರಳಿದ ಎಂಎಲ್‍ಸಿ ಗೋಪಾಲಸ್ವಾಮಿ ಮೇವಿನ ವ್ಯವಸ್ಥೆ ಮಾಡುವುದರ ಜೊತೆಗೆ ರೈತನ ಹೊಲ ಉಳುವ ಮೂಲಕ ಸಾಂಕೇತಿಕವಾಗಿ ಧೈರ್ಯ ತುಂಬಿದ್ದಾರೆ.

ದಡದಳ್ಳಿ ಗ್ರಾಮದ ಯುವ ರೈತ ಸಂತೋಷ್ ಮೇಕೆ ಸಾಕಾಣಿಕೆ ಮೂಲಕ ಬದುಕುಕಟ್ಟಿಕೊಂಡಿದ್ದರು. ಹೆಚ್ಚುವರಿ ಮೇಕೆ ಸಾಕಾಣಿಕೆ ಮಾಡುವ ಉದ್ದೇಶದಿಂದ 100 ಮೇಕೆಗಳನ್ನು ತರಲು ರೈತ ಸಂತೋಷ್ ರಾಜಸ್ಥಾನಕ್ಕೆ ತೆರಳಿದ್ದರು. ಮೇಕೆ ಕೊಂಡುಕೊಂಡು ವಾಪಸ್ ಬರಲು ಸಿದ್ಧತೆ ನಡೆಸಿದ್ದಾಗ ದೇಶಾದ್ಯಂತ ಲಾಕ್‍ಡೌನ್‍ನಿಂದ ಸಂತೋಷ್ ಮೇಕೆಗಳ ಜೊತೆ ರಾಜಸ್ಥಾನದಲ್ಲೇ ಲಾಕ್ ಆಗಿದ್ದಾರೆ. ಇದೀಗ ಪ್ರತಿದಿನ ರಾಜಸ್ಥಾನದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತ ಮೇಕೆ ಸಾಕಲಾಗದೆ ರೈತ ಸಂತೋಷ್ ಪರಿತಪಿಸುತ್ತಿದ್ದಾರೆ.

ಇತ್ತ ಸಂತೋಷ್ ಸ್ವಗ್ರಾಮ ದಡದಳ್ಳಿಯಲ್ಲಿ ಸಾಕಿದ್ದ ಮೇಕೆಗಳೂ ಮೇವಿಲ್ಲದೆ ಸಾವನ್ನಪ್ಪುತ್ತಿದ್ದು, ಮಗನಿಲ್ಲದ ವೇಳೆ ಮೇಕೆ ಸಾವಿನಿಂದ ಪೋಷಕರು ಕಂಗಾಲಾಗಿದ್ದರು. ವಿಷ್ಯ ತಿಳಿದ ಎಂಎಲ್‍ಸಿ ಗೋಪಾಲಸ್ವಾಮಿ ದಡದಳ್ಳಿ ಗ್ರಾಮಕ್ಕೆ ತೆರಳಿ ಮೇಕೆಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಸಾಂಕೇತಿಕವಾಗಿ ರೈತರ ಹೊಲ ಉತ್ತು, ಜೋಳದ ಬೀಜ ಬಿತ್ತಿ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *