ಚನ್ನಪಟ್ಟಣ ಉಪಕಣ; ನಾಮಪತ್ರ ಸಲ್ಲಿಕೆಗೆ ಸಿ.ಪಿ.ಯೋಗೇಶ್ವರ್ ಸಿದ್ಧತೆ

– ‘ಮೈತ್ರಿ’ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ?

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರಿದೆ. ಕ್ಷೇತ್ರದಲ್ಲಿ ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಸಿ.ಪಿ.ಯೋಗೇಶ್ವರ್ ಸಿದ್ಧತೆ ಮಾಡಿಕೊಂಡಿದ್ದಾರೆ.

ಗುರುವಾರ ಅಥವಾ ಶುಕ್ರವಾರ ನಾಮಪತ್ರ ಸಲ್ಲಿಸಲು ಯೋಗೇಶ್ವರ್ ತಯಾರಿದ್ದಾರೆ. ಅದಕ್ಕಾಗಿ ಎರಡು ಸೆಟ್ ಅಫಿಡವಿಟ್ ಸಿದ್ಧ ಮಾಡಿಕೊಂಡಿದ್ದಾರೆ. ಸಿಪಿವೈ ನಡೆಯಿಂದ ಎನ್‌ಡಿಎ ನಾಯಕರು ಕಂಗಾಲಾಗಿದ್ದಾರೆ.

ಒಂದು ಬಿಜೆಪಿ ಅಭ್ಯರ್ಥಿಯಾಗಿ, ಮತ್ತೊಂದು ಪಕ್ಷೇತರ ಅಭ್ಯರ್ಥಿಯಾಗಿ ಅಫಿಡವಿಟ್ ಸಿದ್ಧಪಡಿಸಿಕೊಂಡಿದ್ದಾರೆ. ಮೈತ್ರಿ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧೆ, ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಿಪಿವೈ ಮುಂದಾಗಿದ್ದಾರೆ.

ಇತ್ತ, ಚನ್ನಪಟ್ಟಣ ಕ್ಷೇತ್ರ ಜೆಡಿಎಸ್‌ಗೆ ಬಹುತೇಕ ಫಿಕ್ಸ್ ಆದಂತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಅವರಿಗೆ ಯಾರು ಅವರಿಗೆ ಟಿಕೆಟ್ ಘೋಷಣೆ ಮಾಡ್ತಾರೆ ಎಂದು ಬಿಎಸ್‌ವೈ ಪ್ರತಿಕ್ರಿಯಿಸಿದ್ದಾರೆ.

ಜೆಡಿಎಸ್ ಚಿಹ್ನೆಯಿಂದಲೇ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕೆಂದು ಸಿ.ಪಿ.ಯೋಗೇಶ್ವರ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ ಸಿಪಿವೈ ಅದಕ್ಕೆ ಒಪ್ಪಿಲ್ಲ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆಗೆ ಬಿಗಿಪಟ್ಟು ಹಿಡಿದಿದ್ದಾರೆಂದು ಮೂಲಗಳು ತಿಳಿಸಿವೆ.