ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆ – ತೀರದಲ್ಲಿರುವ ನಿವಾಸಿಗಳ ಸ್ಥಳಾಂತರ

ಬೆಂಗಳೂರು: ಕರಾವಳಿಯಲ್ಲಿ ಕೊನೆಗೂ ಮುಂಗಾರು ಬಿರುಸು ಪಡೆದಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಮಂಗಳೂರು ನಗರದ ರಸ್ತೆಗಳು ಹೊಳೆಯಂತೆ ತುಂಬಿಕೊಂಡಿವೆ. ಇತ್ತ ಕಡಲ್ಕೊರೆತವೂ ಹೆಚ್ಚಾಗಿದ್ದು, ತೀರದಲ್ಲಿರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದ ಅಲೆಗಳು ನಾಲ್ಕು ಮೀಟರ್ ಎತ್ತರಕ್ಕೆ ತೀರಕ್ಕೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಎರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು 24 ಗಂಟೆಯಲ್ಲಿ 122 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕುಂದಾಪುರದಲ್ಲಿ 124 ಮಿಲಿ ಮೀಟರ್, ಕಾರ್ಕಳದಲ್ಲಿ 122 ಮಿಲಿ ಮೀಟರ್, ಉಡುಪಿಯಲ್ಲಿ 120 ಮಿಲಿ ಮೀಟರ್ ಮಳೆ ಸುರಿದಿದೆ.

ಅಲ್ಲದೆ ಕೊಡಗಿನ ವಿರಾಜಪೇಟೆ ತಾಲೂಕಿನ ಶ್ರೀಮಂಗಲ, ಕುಟ್ಟ ಸುತ್ತಮುತ್ತ ಜೋರು ಮಳೆ ಆಗಿದೆ. ಆದರೆ ಹಾರಂಗಿ ಡ್ಯಾಂನಲ್ಲಿ ನೀರೇ ಇಲ್ಲ. ಇತ್ತ ಬರದ ನಾಡು ರಾಯಚೂರಿನಲ್ಲಿ ಧಾರಾಕಾರ ಮಳೆ ಆಗಿದೆ.

Comments

Leave a Reply

Your email address will not be published. Required fields are marked *