ಮುಡಿ ತೆಗೆಯಲ್ಲ, ಬಾತ್ ತಿನ್ನಲ್ಲ- ಸುಳ್ವಾಡಿ ದುರಂತಕ್ಕೆ 1 ವರ್ಷ

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ನಾಳೆ (ಡಿ.14)ಕ್ಕೆ ಒಂದು ವರ್ಷವಾಗುತ್ತದೆ. ಒಂದು ವರ್ಷದಲ್ಲಿ ಸುಳ್ವಾಡಿ ಗ್ರಾಮದಲ್ಲಿ ನಾನಾ ಬದಲಾವಣೆಗಳು ಉಂಟಾಗಿದೆ. ಒಂದು ವರ್ಷದ ಹಿಂದೆ ನಡೆದ ಘಟನೆ ಇನ್ನೂ ಕೂಡ ಜನರಲ್ಲಿ ಮಾಸಿಲ್ಲ.

ಹೌದು. ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ನಡೆದ ಕಿಚ್ ಗತ್ತಿ ಮಾರಮ್ಮನ ದೇವಾಲಯದ ವಿಷ ಪ್ರಸಾದ ಉಂಡು 17 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಆ ನಂತರ ದೇವಾಲಯಕ್ಕೆ ಸರ್ಕಾರದಿಂದ ಬೀಗ ಜಡಿಯಲಾಗಿತ್ತು. ಇದೀಗ ಪ್ರಕರಣಕ್ಕೆ ಒಂದು ವರ್ಷ ಆಗ್ತಿರೋ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲು ತೆರೆಯಬೇಕು ಅನ್ನೋದು ಭಕ್ತರ ಆಶಯವಾಗಿದೆ.

ಸುಳ್ವಾಡಿ ಮಾರಮ್ಮನ ಬಾಗಿಲು ತೆರೆಯುವ ತನಕ ಮುಡಿ ಕೊಡಲ್ಲ, ಮರಿ ಕೊಯ್ಯಲ್ಲ ಅಂತ ಭಕ್ತರು ಹಠ ಹಿಡಿದಿದ್ದಾರೆ. ಸುಳ್ವಾಡಿ ವಿಷ ಪ್ರಸಾದ ಉಂಡಿದ್ದ ಪುಟ್ಟಸ್ವಾಮಿ, ದೇವಾಲಯದ ಬಾಗಿಲು ಶೀಘ್ರವಾಗಿ ತೆಗೆಯಬೇಕು. ಒಂದು ವೇಳೆ ತೆಗೆಯದಿದ್ದರೆ ಮುಡಿ ಹರಕೆ ತೀರಿಸಲ್ಲ ಎಂದು ಹೇಳುತ್ತಿದ್ದಾರೆ. ಪ್ರಸಾದ ದುರಂತದಲ್ಲಿ ತಮ್ಮ ಮಗಳು ಅನಿತಾ ಕೂಡ ಸಾವನ್ನಪ್ಪಿದ್ದು, ಆಗಿದ್ದು ಆಗಿದೆ ದೇವರ ಬಾಗಿಲು ಮುಚ್ಚೋದು ಸರಿಯಲ್ಲ ಅಂತಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ಭಕ್ತರು ದೇವರಿಗೆ ಹರಕೆ ಬಿಟ್ಟಿರೋ ಕುರಿ, ಮೇಕೆ ಕೂಡ ಬಲಿ ಕೊಡಲ್ಲ. ದೇವರ ಬಾಗಿಲು ತೆರೆದರಷ್ಟೇ ಬಲಿ ಕೊಡೋದು ಎಂದು ಹೇಳುತ್ತಿದ್ದಾರೆ.

ಒಂದು ಕಡೆ ಮುಡಿ, ಕುರಿ ಬಲಿ ವಿಚಾರವಾದರೆ ಮತ್ತೊಂದೆಡೆ ವಿಷ ಪ್ರಸಾದ ತಿಂದ ಅಸ್ವಸ್ಥರು ಬಾತ್ ಬೇಡ ಅಂತಿದ್ದಾರೆ. ಯಾಕಂದ್ರೆ ಕಳೆದ ಒಂದು ವರ್ಷದ ಹಿಂದೆ ವಿಷ ಪ್ರಸಾದದ ಟೊಮೆಟೋ ಬಾತ್ ತಿಂದು ಇಂದಿಗೂ ಕೂಡ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬಾತ್ ಅಂದರೆ ಸಾಕು ಕನಸಲ್ಲೂ ಬೆಚ್ಚುತ್ತಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕೂಡ ಬಾತ್ ತ್ಯಜಿಸಿದ್ದಾರೆ.

Comments

Leave a Reply

Your email address will not be published. Required fields are marked *