ಆನೆ ದಾಳಿಗೆ ಬಲಿ- ಪೊಲೀಸರಿಂದ್ಲೇ ವ್ಯಕ್ತಿಯ ಅಂತ್ಯಕ್ರಿಯೆ

ಚಾಮರಾಜನಗರ: ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಪೊಲೀಸರೇ ನೆರವೇರಿಸಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.

4 ದಿನಗಳ ಹಿಂದೆಯಷ್ಟೇ 44 ವರ್ಷದ ವ್ಯಕ್ತಿಯೊಬ್ಬರು ಆನೆ ದಾಳಿಗೊಳಗಾಗಿ ಮೃತಪಟ್ಟಿದ್ದರು. ಜಿಲ್ಲೆಯ ಗಡಿ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತದೆ.

ಇತ್ತ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಮೃತನ ಕುಟುಂಬಸ್ಥರು ಮಾತ್ರ ಕೊರೊನಾ ವೈರಸ್ ಭೀತಿಯಿಂದ ಮೃತದೇಹವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ಕುಟುಂಬಸ್ಥರೇ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದಾಗ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ ಹಾಗೂ ಇನ್ನಿಬ್ಬರು ಪೇದೆಗಳು ಸೇರಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರದಲ್ಲಿಯೇ ಹಿಂದೂ ಸಂಪ್ರದಾಯದಂತೆ ಮೃತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೊಲೀಸರಿಗೆ ಅರ್ಚಕರು ಕೂಡ ಸಾಥ್ ನೀಡಿದ್ದಾರೆ.

ಮಾದೇಗೌಡ ಹಾಗೂ ಇಬ್ಬರು ಪೇದೆಗಳು ಜೊತೆಗೂಡಿ ಗುಂಡಿ ತೆಗೆದು ಮೃತದೇಹದ ಮೇಲೆ ಬಿಳಿ ಬಟ್ಟೆಯನ್ನು ಹಾಕಿ ಸಮಾಧಿ ಮಾಡಿದರು. ಅಲ್ಲದೆ ನಂತರ ಊದುಬತ್ತಿ ಹಚ್ಚಿ ದೇವರಲ್ಲಿ ಪ್ರಾರ್ಥನೆ ಕೂಡ ಮಾಡಿಕೊಂಡಿದ್ದಾರೆ.

ಮೃತಪಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದನು. 3 ದಿನಗಳ ಹಿಂದೆಯಷ್ಟೇ ಮೂವರು ಪೊಲೀಸರು ಸೇರಿ ಆತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಉಸ್ತುವಾರಿ ಸುನಿಲ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *