ಹಣಕ್ಕಾಗಿ ರೆಸಾರ್ಟ್ ಮಾಲೀಕನನ್ನ ಅಪಹರಿಸಿದ್ದ ನಾಲ್ವರು ಅಂದರ್- ಇಬ್ಬರು ಪರಾರಿ

– ಹಲ್ಲೆಗೊಳಗಾಗಿದ್ದ ರೆಸಾರ್ಟ್ ಮಾಲೀಕನ ರಕ್ಷಣೆ

ಚಾಮರಾಜನಗರ: ಹಣಕ್ಕಾಗಿ ರೆಸಾರ್ಟ್ ಮಾಲೀಕನನ್ನು ಅಪಹರಿಸಿ ದೈಹಿಕ ಹಲ್ಲೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ರಷೀದ್, ಅಬುಬಕರ್, ಇರ್ಷಾದ್ ಹಾಗೂ ಹನೀಫ್ ಬಂಧಿತರು. ಆರೋಪಿಗಳು ಖುಷಿ ರೆಸಾರ್ಟ್ ಮಾಲೀಕ ಮಹಾದೇವ ನಾಯ್ಕ್ ಅವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇನ್ನೂ ಇಬ್ಬರು ಪರಾರಿಯಾಗಿದ್ದು ಅವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಹಾದೇವ ನಾಯ್ಕ್ ಅವರ ರೆಸಾರ್ಟ್ ಅನ್ನು ಒಂದು ವರ್ಷ ಗುತ್ತಿಗೆ ಪಡೆದು ನಡೆಸಿದ್ದ ಬಷೀರ್ ಎಂಬಾತನಿಗೆ ವ್ಯವಹಾರದಲ್ಲಿ ನಷ್ಟವುಂಟಾಗಿ 60ರಿಂದ 70 ಲಕ್ಷ ರೂ. ಕಳೆದುಕೊಂಡಿದ್ದ. ಮುಂಗಡ ನೀಡಿದ್ದ ಹಣ ಹಾಗೂ ನಷ್ಟವಾದ ಬಾಬ್ತನ್ನು ರೆಸಾರ್ಟ್ ಮಾಲೀಕ ಮಹಾದೇವ ನಾಯ್ಕ್ ಅವರೇ ತುಂಬಿಕೊಡಬೇಕೆಂದು ದುಂಬಾಲು ಬಿದ್ದು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಹಣ ಕೊಡಲು ನಿರಾಕರಿಸುತ್ತಿದ್ದ ಮಹಾದೇವ ನಾಯ್ಕ್ ಅವರನ್ನು ಇಂದು ಬೆಳಗ್ಗೆ ಅಪಹರಿಸಿ ಕಬ್ಬಹಳ್ಳಿಯ ತೋಟದ ಮನೆಯಲ್ಲಿ ಇರಿಸಲಾಗಿತ್ತು. ಈ ವೇಳೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮಹಾದೇವ ನಾಯ್ಕ್ ಅವರ ಕುಟುಂಬಸ್ಥರು ಇಂದು ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿದ ಮೂರು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವ ನಾಯ್ಕ್ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *