ಭೂ ಪರಿವರ್ತನೆಗೆ ರೈತರಿಂದ ಲಂಚ – ಎಸಿಬಿ ಬಲೆಗೆ ಅರಣ್ಯ ಇಲಾಖೆ ಗುಮಾಸ್ತ

ಚಾಮರಾಜನಗರ: ಭೂ ಪರಿವರ್ತನೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆ ಗುಮಾಸ್ತನೋರ್ವ ಎಸಿಬಿ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಚಾಮರಾಜನಗರ ಅರಣ್ಯ ಕಚೇರಿಯಲ್ಲಿನ ಗುಮಾಸ್ತ ಪುಟ್ಟಸ್ವಾಮಿ ಸಿಕ್ಕಿ ಬಿದ್ದ ಅರಣ್ಯ ಇಲಾಖೆ ಗುಮಾಸ್ತ. ಹರದನಹಳ್ಳಿಯ ರೈತ ಲಿಂಗರಾಜು ತಮ್ಮ ಜಮೀನಿನ ಭೂ ಪರಿವರ್ತನೆ ಮಾಡಿಕೊಡಲು ಅರ್ಜಿ ಸಲ್ಲಿಸಿದಾಗ, ಈತ ಆ ಕೆಲಸ ಮಾಡಿಕೊಡಲು 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅದರಂತೆ ಇಂದು ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಬಂದು ಹಣ ಕೊಡಲು ಪುಟ್ಟಸ್ವಾಮಿ ಹೇಳಿದ್ದನಂತೆ.

ಹೀಗಾಗಿ ಇಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರೈತನಿಂದ 2500 ರೂ. ಹಣ ಪಡೆಯುವಾಗ ಎಸಿಬಿ ಇನ್ಸ್ ಪೆಕ್ಟರ್ ದೀಪಕ್ ದಾಳಿ ನಡೆಸಿ ಹಣದ ಸಮೇತ ಪುಟ್ಟಸ್ವಾಮಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪುಟ್ಟಸ್ವಾಮಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *