ಕಾಡು ಪ್ರಾಣಿಯಿಂದ ಹಸು ಸತ್ತರೆ 10 ಸಾವಿರ ಪರಿಹಾರ – ಅರಣ್ಯ ಸಚಿವ ಆನಂದ್ ಸಿಂಗ್

– ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳ

ಚಾಮರಾಜನಗರ: ಕೊರೊನಾದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರದ ಕುಂದಕೆರೆ ವಲಯದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಅವರು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೆ. ಅಷ್ಟರಲ್ಲೇ ಕೊರೊನಾ ಬಂತು. ಹಾಗಾಗಿ ಅದು ನೆನಗುದಿಗೆ ಬಿದ್ದಿದೆ ಎಂದರು.

ಬಂಡೀಪುರದ 40 ಕಿಲೋ ಮೀಟರ್ ಸೇರಿದಂತೆ ರಾಜ್ಯದ ಅರಣ್ಯಗಳ ಅಂಚಿನಲ್ಲಿ 650 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ ಹೊಂದಲಾಗಿದೆ. ಇದಕ್ಕೆ 100 ಕೋಟಿ ರೂಪಾಯಿ ಅನುದಾನವು ಸಹ ಇದೆ. ಕುಂದಕೆರೆ ವಲಯದಲ್ಲಿ ಹಲವಾರು ಜಾನುವಾರುಗಳನ್ನು ಕೊಂದು ಹಾಕಿರುವ ಹುಲಿ ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಹುಲಿ ಸೆರೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸಾಕು ಪ್ರಾಣಿಗಳಲ್ಲಾಗಲಿ, ಕಾಡು ಪ್ರಾಣಿಗಳಲ್ಲಾಗಲಿ ಕೊರೊನಾ ಕಂಡು ಬಂದಿಲ್ಲ. ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ತಗುಲದಂತೆ ಮುಂಜಾಗ್ರತೆ ವಹಿಸಲಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಹಸು ಸತ್ತರೆ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದು ಸಾಲುವುದಿಲ್ಲ ಎಂಬ ಹಿನ್ನೆಲೆಯಲ್ಲಿ ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *