ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲು ತೊಳೆದ್ರೂ ಕಡಿಮೆನೇ: ನಟ ದರ್ಶನ್

ಮಂಡ್ಯ: ಇಂದು ನೀವು ತೋರಿಸುತ್ತಿರುವ ಪ್ರೀತಿಗೆ ನಮ್ಮ ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆಯೇ ಎಂದು ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆನೇ. ಯಾಕೆಂದರೆ ಈ ಉರಿ ಬಿಸಿಲಲ್ಲಿ ಅಲ್ಲಿಂದ ನಮ್ಮ ಜೊತೆ ನಡೆದುಕೊಂಡು ಬಂದಿದ್ದೀರಿ. ನಾನು ತಲಾ ಇಷ್ಟಿಷ್ಟು ಅಂತ ಯಾರಿಗೂ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಯಿಂದ ನೀವು ಬಂದಿದ್ದೀರಿ ಎಂದು ಹೇಳಿದರು.

ಎರಡು ದಿನದಿಂದ ನಾವು ನೋಡುತ್ತಿದ್ದೇವೆ. ನಮ್ಮ ಬಗ್ಗೆ ಏನೇನು ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಾವು ಕೋಪ, ಬೇಜಾರು ಹಾಗೂ ನೋವು ಮಾಡಿಕೊಳ್ಳುವುದಿಲ್ಲ. ಅದನ್ನು ನಾವು ಹೆಮ್ಮೆಯಿಂದ ತೆಗೆದುಕೊಳ್ಳುತ್ತೇವೆ ಎಂದರು.

ಅಮ್ಮ ಇಲ್ಲಿಗೆ ಬಂದು ನಿಂತಿದ್ದಾರೆ. ಅವರ ಮೇಲೆ ನೀವು ತುಂಬಾ ಪ್ರೀತಿ ತೋರುತ್ತಿದ್ದೀರ. ಮೇ 23 ರಂದು ಪಟ ಪಟಾ ಮೇಲೆ ಹೋಗುತ್ತಿರಬೇಕು. ನಮ್ಮನ್ನ ಬೈದೋರು ಕೆಳಗೆ ಹೋಗಬೇಕು. ಅಷ್ಟೇ ನಾನು ಕೇಳಿಕೊಳ್ಳೋದು ಎಂದು ದರ್ಶನ್ ಹೇಳಿದರು.

ನಿಮ್ಮ ಪ್ರೀತಿ, ಪ್ರೋತ್ಸಾಹ, ಬೆಂಬಲ ಎಲ್ಲವೂ ಅಮ್ಮನ ಮೇಲಿರಲಿ. ಇವತ್ತಿಂದ 18ನೇ ದಿನಾಂಕದವರೆಗೂ ನಮ್ಮ ಪರೇಡ್ ಶುರು. ಪರೇಡ್ ಮಾಡೋಣ, ಅಮ್ಮನಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಜನತೆಯ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *