ಕಾಂಗ್ರೆಸ್ ಸರ್ಕಾರದ ಬೂಟಾಟಿಕೆ, ಪುಂಡಾಟಿಕೆಯ ಸಮೀಕ್ಷೆ – ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಕೈಬಿಡಿ: ಛಲವಾದಿ ಆಗ್ರಹ

ಬೆಂಗಳೂರು: ಒಂದು ನಿಗದಿತ ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದ್ಯಾ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರಣೆ ಕೊಟ್ಟಿದ್ದಾರೆ. ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ವೇಳೆ ಸೇರಿಸಬಾರದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ (Chalavadi Narayanaswamy) ಸ್ವಾಮಿ ಆಗ್ರಹಿಸಿದರು.

ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ (Caste Census) ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು. ಇದನ್ನು ಸಾಮಾಜಿಕ-ಆರ್ಥಿಕ ಸರ್ವೇ ಎಂದು ಹೇಳಿದ್ದಾರೆ. ಆದರೆ, ಇವರು ಜಾತಿಗಳಿಗೆ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲಕ್ಕೂ ಕ್ರಿಶ್ಚಿಯನ್ ಪದ ಸೇರಿಸಿದ್ದಾರೆ. ಇದರ ಹಿಂದೆ ಇವರನ್ನೆಲ್ಲ ಕ್ರಿಶ್ಚಿಯನ್ ಮಾಡುವ ಉದ್ದೇಶವೇ? ಕಾಂಗ್ರೆಸ್ ಸರ್ಕಾರದ ಈ ಸಮೀಕ್ಷೆ ಬೂಟಾಟಿಕೆ ಮತ್ತು ಪುಂಡಾಟಿಕೆಯದು ಎಂದು ಆಕ್ಷೇಪಿಸಿದರು.ಇದನ್ನೂ ಓದಿ: ಕುರುಬ ಸಮುದಾಯದ ಬಗ್ಗೆ ಅಧ್ಯಯನ ಮಾಡಿ ಛಲವಾದಿ ನಾರಾಯಣಸ್ವಾಮಿ ಮಾತಾಡಲಿ: ಪ್ರದೀಪ್ ಈಶ್ವರ್

ಯಾವ ಜಾತಿಯಿಂದ ಬಂದವರು, ಯಾವ ಧರ್ಮದಿಂದ ಬಂದವರೆಂದು ನೀವು ಸಮೀಕ್ಷೆಯಲ್ಲಿ ತಿಳಿಸಬೇಕಿಲ್ಲ. ಇದು ಸರ್ಕಾರಿ ದಾಖಲೆಗೆ ಬೇಕಾಗಿಲ್ಲ. ಇದೆಲ್ಲ ಬಿಟ್ಟು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ ಮಾಡುವುದು ಕಾನೂನುಬಾಹಿರ. ಇದನ್ನು ಮಾಡಿದರೆ ಜನಾಂಗಗಳ ಹೋರಾಟ ಸತತವಾಗಿ ಇರಲಿದೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಬಾರದೆಂಬ ಉದ್ದೇಶ ಸರ್ಕಾರಕ್ಕಿದೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಹೇಗಿರುತ್ತದೆ ಎಂಬುದು ಜನರಿಗೆ ಬಿಟ್ಟ ವಿಚಾರ ಎಂದು ಕಿಡಿಕಾರಿದರು.

ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ?:
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ? ಸೋನಿಯಾ ಗಾಂಧಿ ಈ ರೀತಿ ಮಾಡಲು ಹೇಳಿದ್ದಾರಾ? ಜನಸಾಮಾನ್ಯರು ಅರ್ಜಿ ನೀಡಿ ಅಥವಾ ಬೀದಿಗಿಳಿದು ಕ್ರಿಶ್ಚಿಯನ್ ಎಂದು ಸೇರಿಸಲು ಒತ್ತಾಯಿಸಿದರೇ? ಎಂದು ಪ್ರಶ್ನಿಸಿದರು. ಇದನ್ನು ಮಾಡದಂತೆ ಜನರು ಬೀದಿಗೆ ಇಳಿದಿದ್ದಾರೆ. ನಿಮಗೆ ಅದರ ಕುರಿತು ಗೌರವ ಇಲ್ಲ. ಮುಖ್ಯಮಂತ್ರಿ ಒಬ್ಬರನ್ನು ಹೊರತುಪಡಿಸಿದರೆ ಇಡೀ ಕಾಂಗ್ರೆಸ್ ಸಚಿವ ಸಂಪುಟವು ಇದರ ವಿರುದ್ಧ ಇದೆ. ಬಿಜೆಪಿ ಪೂರ್ಣ ಮುಖಂಡತ್ವ ನಿಮ್ಮ ವಿರುದ್ಧ ಇದೆ. ಜನತಾದಳ ವಿರುದ್ಧ ಇದೆ. ಮಠಮಾನ್ಯಗಳ ಗುರುಹಿರಿಯರು, ಸಮುದಾಯಗಳ ಮುಖಂಡರು ನಿಮ್ಮ ವಿರುದ್ಧ ಇದ್ದಾರೆ ಎಂದು ಗಮನಸೆಳೆದರು.

ರಾಜ್ಯದಲ್ಲಿ ಅತಿಯಾದ ಗೊಂದಲದಿಂದ, ಗೊಂದಲಗಳ ಮಧ್ಯೆ ಇವತ್ತಿನಿಂದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿಗಳ ಸಮೀಕ್ಷೆ ಮಾಡಲು ಸರ್ಕಾರ ಮುಂದಾಗಿದೆ. ಈ ಸಮೀಕ್ಷೆ ಹೊಸದೇನೂ ಅಲ್ಲ. ಕಾಂತರಾಜು ಆಯೋಗ ರಚಿಸಿ ಸಮೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ ಅದನ್ನು ಒಪ್ಪಲಿಲ್ಲ. ಆ ವರದಿ ಎಲ್ಲಿ ಹೋಯಿತೆಂದು ಗೊತ್ತಿಲ್ಲ. ಅದು ಕಳವಾಗಿದೆಯಂತೆ, ಅದೇನು ಚಿನ್ನವೇ? ಕದ್ದ ಆಯೋಗದ ವರದಿಯನ್ನು ಪತ್ತೆ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.ಇದನ್ನೂ ಓದಿ: ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ

ಜನರ ಹಣ ಇಷ್ಟಬಂದಂತೆ ಪೋಲು ಮಾಡಲು ಈ ಸಮೀಕ್ಷೆ:
ಮೊದಲನೇ ಆಯೋಗಕ್ಕೆ ಸುಮಾರು 180 ಕೋಟಿ ರೂ. ಖರ್ಚು ಮಾಡಿದ್ದರು. ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿಗೆ ಎಷ್ಟು ಖರ್ಚಾಗಿದೆ ಎಂದು ಬಾಯಿ ಬಿಡುತ್ತಿಲ್ಲ. ಕಾಂತರಾಜು ವರದಿ ಒಪ್ಪಿದ್ದರೆ ಜನರ ಭಾವನೆಗೆ ಗೌರವ ಬರುತ್ತಿತ್ತು. ಈಗ ಮತ್ತೆ 425 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಇದೇನು ಕಾಂಗ್ರೆಸ್ಸಿನ ಖಜಾನೆ, ಮನೆಯಿಂದ ತಂದು ಕೊಡುತ್ತೀರಾ? ಜನರ ಹಣವನ್ನು ಇಷ್ಟಬಂದಂತೆ ಪೋಲು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟವರು? ಎಂದು ಪ್ರಶ್ನಿಸಿದರು.

ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯ ಆಗುತ್ತಿಲ್ಲ. ನಗರಗಳಲ್ಲಿ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲ. ಇಲ್ಲಿಂದ ಕಾಲ್ತೆಗೆಯುವ ಕುರಿತು ರಾಜ್ಯದ ಕೈಗಾರಿಕೋದ್ಯಮಿಗಳು ಪತ್ರ ಬರೆಯುತ್ತಿದ್ದಾರೆ. ಟ್ವೀಟ್ ಮಾಡಿ ತಿಳಿಸುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಸಮೀಕ್ಷೆಯ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಗುಂಡಿ ಮುಚ್ಚಲು ಆಗದವರು ಬೆಂಗಳೂರಿಗೆ ಸುರಂಗ ಮಾಡ್ತಾರಂತೆ ಎಂದು ಟೀಕಿಸಿದರು.

15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?:
15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳಿದ್ದಾರೆ. ನೀವೇ ಹೇಳಿದಂತೆ 1.7 ಕೋಟಿ ಪರಿಶಿಷ್ಟ ಜಾತಿಯವರ ಜನಸಂಖ್ಯೆ. 1.7 ಕೋಟಿ ಜನಸಂಖ್ಯೆಯ ಸಮೀಕ್ಷೆಗೆ 3-4 ಸಾರಿ ಮುಂದೂಡಿ 2ರಿಂದ ಎರಡೂವರೆ ತಿಂಗಳ ಕಾಲ ಸಮೀಕ್ಷೆ ಮಾಡಿದ್ದೀರಿ. ಶೇ.65ರಷ್ಟು ಮಾತ್ರ ಮಾಡಿದ್ದೀರಿ. ಉಳಿದುದೆಲ್ಲ ಬೋಗಸ್, ಬೊಗಳೆ ಅಂಕಿ ಅಂಶ. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೇವಲ 15 ದಿನಗಳಲ್ಲಿ ಇಡೀ ರಾಜ್ಯದ ಸಮೀಕ್ಷೆ ಮಾಡುವುದಾದರೆ ಉಪಗ್ರಹ ಆಧಾರದಡಿ ಸಮೀಕ್ಷೆ ಆಗಬೇಕಷ್ಟೇ ಎಂದರು.

ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿ ತರಿಸಿಕೊಂಡರು. ಅದೂ ಆಯಿತು. ವರದಿ ಒಪ್ಪಿಗೆ ಪಡೆಯಲಿಲ್ಲ. ಈಗ 3ನೇ ಆಯೋಗದ ವರದಿಗೆ ಹೊರಟಿದ್ದಾರೆ. ಮೊದಲನೇ ಆಯೋಗದ ವರದಿಗೆ ಗೊಂದಲ ಇರಲಿಲ್ಲ. ಎರಡನೇ ವರದಿ ಬಂದಾಗ ಅಲ್ಪ ಗೊಂದಲ ಆರಂಭವಾಗಿತ್ತು. ಈಗ 3ನೇ ಆಯೋಗ ಮಾಡಿದ್ದು, ಸಂಪೂರ್ಣ ಗೊಂದಲ ಇದೆ. ಎಲ್ಲರ ಇಚ್ಛಾಶಕ್ತಿಗೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರವು ಈ ಆಯೋಗದ ವರದಿ ತಯಾರಿಸಲು ಹೊರಟಿದೆ ಎಂದು ಹೇಳಿದರು.ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್