ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

ಬೆಂಗಳೂರು: ಕುಮಾರಸ್ವಾಮಿ ಆರ್‌ಎಸ್‌ಎಸ್‌ಗೆ ಬೈಯುವುದು ಹೊಸದೆನಲ್ಲ. ಯಾವಾಗ ಮಾಧ್ಯಮಗಳಲ್ಲಿ ತನ್ನ ಪ್ರಚಾರ ಕಡಿಮೆಯಾಗುತ್ತಿದೆ ಎಂದು ಅನಿಸಿದಾಗ ಮಾಜಿ ಸಿಎಂ ಕುಮಾರಸ್ವಾಮಿ ಆರ್‌ಎಸ್‌ಎಸ್‌, ಮೋದಿಯನ್ನು ಬೈಯುತ್ತಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕೇಂದ್ರದಲ್ಲಿ ಇರುವುದು ಆರ್‌ಎಸ್‌ಎಸ್‌ ಸರ್ಕಾರ, ಆರ್‌ಎಸ್‌ಎಸ್‌ಗೆ ಸೇರಿದ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ ರಾಷ್ಟ್ರೀಯತೆಯನ್ನು ಬೆಳೆಸುತ್ತದೆ ಎನ್ನುವುದು ನಿಜ. ಹಾಗೆಂದ ಮಾತ್ರಕ್ಕೆ ರಾಷ್ಟ್ರೀಯತೆ ಚಿಂತನೆಯನ್ನು ಬೆಳೆಸಿಕೊಂಡಿದವರು ಎಲ್ಲ ಆರ್‌ಎಸ್‌ಎಸ್‌ನವರು ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ರಾಷ್ಟ್ರೀಯತೆಯ ಚಿಂತನೆಯನ್ನು ಹೊಂದಿದರೆ ಯಾವುದೇ ಸಮಸ್ಯೆ ಇಲ್ಲ. ಆಟೋ ಡ್ರೈವರ್ ಅವರನ್ನು ತೆಗೆದುಕೊಂಡರೆ ಆತನೂ ರಾಷ್ಟ್ರೀಯವಾದಿ ಎಂದು ಹೇಳುತ್ತಾನೆ. ಅದೇ ರೀತಿಯಾಗಿ ಐಪಿಎಸ್, ಐಎಎಸ್‍ನಲ್ಲೂ ರಾಷ್ಟ್ರೀಯ ಚಿಂತನೆಯನ್ನು ಬೆಳೆಸಿದವರು ಇರುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ಯಾವುದು ಸರಿ ಇದೆಯೋ ಅದನ್ನು ಜನ ಒಪ್ಪುತ್ತಾರೆ ಎಂದು ತಿರುಗೇಟು ನೀಡಿದರು.

ರಾಷ್ಟ್ರೀಯ ಗೌರವ ಇಟ್ಟುಕೊಂಡರೆ ಜನರು ಹೆಮ್ಮೆ ಪಡುತ್ತಾರೆ. ಹೀಗಿರುವಾಗ ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯತೆ ವಿಚಾರ ಬಂದಾಗ ಹೊಟ್ಟೆ ಉರಿ ಯಾಕೆ? ನಾನು ಭಾರತದ ಪರ ಎಂದು ಹೇಳಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ 

ನರೇಂದ್ರ ಮೋದಿ ಆರ್‌ಎಸ್‌ಎಸ್‌ ಕೈಗೊಂಬೆ ಎಂಬ ಎಚ್‍ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು. ಆದರೆ ಅವರು ಸೋನಿಯಾ ಗಾಂಧಿ ಅವರ ವಿಚಾರಧಾರೆಯ ಕೈಗೊಂಬೆಯಾಗಿರಲ್ಲ. ಅವರು ವ್ಯಕ್ತಿಯ ಕೈಗೊಂಬೆಯಾಗಿದ್ದರು. ಆದರೆ ಆರ್‌ಎಸ್‌ಎಸ್‌ ಎನ್ನುವುದು ವ್ಯಕ್ತಿಯ ಕೈಗೊಂಬೆಯಲ್ಲ. ಅದೊಂದು ವಿಚಾರಧಾರೆ. ಒಂದು ವ್ಯಕ್ತಿಯನ್ನು ಅನುಸರಿಸಿ, ಒಂದು ಪರಿವಾರವನ್ನು ಅನುಸರಿಸಿ, ಅದಕ್ಕೆ ಜೀತ ಮಾಡಿಕೊಂಡು ಸಿಎಂ, ಪಿಎಂ ಆಗಿದ್ದೇನೆ ಎಂದು ಹೇಳುವುದು ತಪ್ಪಲ್ಲ ಅನ್ನುವುದಾದರೆ ಇಡೀ ರಾಷ್ಟ್ರ ಒಪ್ಪಿರುವ ಚಿಂತನೆಯಿಂದ ನಾನು ಬಂದಿದ್ದೇನೆ ಎಂದು ಹೇಳಿದರೆ ಅದು ಯಾಕೆ ತಪ್ಪಾಗಬೇಕು ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *