ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸು ಸಾಕುವ ಜನರಿಗೆ ನಿಜಕ್ಕೂ ಶಾಕ್ ಆಗುವಂಥ ಸುದ್ದಿ ಇದು. ಬೆಂಗಳೂರಿನಲ್ಲಿ ತುಂಬಾ ಜನರು ಹಸು ಸಾಕಿದ್ದಾರೆ. ಕಾಂಕ್ರೀಟ್ ಕಾಡಿನಂತಿರುವ ಬೆಂಗಳೂರಿನಲ್ಲಿ ಮೇವು ಹೊಂದಿಸಿ ಹಸುಗಳನ್ನು ಸಾಕಿ ಬದುಕು ಕಟ್ಟಿಕೊಂಡಿರೋರು ತುಂಬಾ ಜನರಿದ್ದಾರೆ. ಇತ್ತೀಚೆಗೆ ನಗರದಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಚಿನ್ನ, ವಾಹನ, ಹಣ ಕಳ್ಳತನ ಪ್ರಕರಣಗಳ ಜೊತೆಗೆ ಹಸು, ಕರು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಾರೆ.

ರಾತ್ರೋರಾತ್ರಿ ಬರುವ ಹಸು ಕಳ್ಳರು ಕ್ಯಾಂಟರ್ ಗಳನ್ನು ತಂದು ಕೊಟ್ಟಿಗೆಗಳಿಂದ ಹಸು, ಕರು, ಎಮ್ಮೆಗಳ ಕಳ್ಳತನ ಮಾಡ್ಕೊಂಡು ಪರಾರಿಯಾಗ್ತಿದ್ದಾರೆ. ಪಬ್ಲಿಕ್ ಟಿವಿಗೆ ಹಸು ಕಳ್ಳರ ಕೈ ಚಳಕದ ವೀಡಿಯೋ ಲಭ್ಯವಾಗಿದೆ. ಜಕ್ಕೂರಿನಲ್ಲಿ ಕಳೆದ ಶುಕ್ರವಾರ ರಾತ್ರಿ ಹಸು ಮತ್ತು ಅದರ ಕರುವನ್ನು ಕ್ಯಾಂಟರ್ ನಲ್ಲಿ ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪ್ರಮುಖವಾಗಿ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹಸು ಮತ್ತು ಎಮ್ಮೆಗಳ ಕಳ್ಳತನ ಹೆಚ್ಚಾಗಿದೆ. ಅಮೃತಹಳ್ಳಿ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಜಕ್ಕೂರು ಲೇಔಟ್, ಜಕ್ಕೂರು, ಬ್ಯಾಟರಾಯನಪುರದಲ್ಲಿ ಕಳೆದ ಮೂರು ತಿಂಗಳಿಂದ ಸರಿ ಸುಮಾರು 15 ಕ್ಕೂ ಹೆಚ್ಚು ಹಸುಗಳ ಕಳ್ಳತನ ನಡೆದಿದೆ. ಪರಿಣಾಮ ಈ ಭಾಗದ ಹಸು ಸಾಕಾಣಿಕೆದಾರರು ಬಹಳ ಆತಂಕಗೊಂಡಿದ್ದಾರೆ.

ಜಾನುವಾರು ಸಾಕಿದವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕಳ್ಳರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಆದರೆ ಕಳ್ಳರ ಪತ್ತೆ ಇನ್ನೂ ಆಗಿಲ್ಲ. ಹಸು, ಕರು, ಎಮ್ಮೆ ಕದ್ದವರು ಅದನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಆರೋಪವೂ ಇದೆ. ಜಾನುವಾರುಗಳ ಕಳ್ಳತನಗಳ ಹಿಂದೆ ನಗರದಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply