ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಪೊಲೀಸ್ ಪೇದೆಗಳು ಸಿಸಿಬಿ ಬಲೆಗೆ!

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧವಾಗಿ ಸಿಸಿಬಿ ಪೊಲೀಸರು ಇಬ್ಬರು ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸ್ ಪೇದೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕೇಶ್ ಹಾಗೂ ಲಕ್ಷ್ಮಣ್ ಬಂಧಿತ ಸಿ.ಎ.ಆರ್ ಪೊಲೀಸ್ ಪೇದೆಗಳು. ಇವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 18 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಬಂಧಿತ ಆರೋಪಿಗಳು ಡಿವೈಎಸ್ಪಿ, ಎಸ್‍ಐ, ಎಫ್‍ಡಿಎ, ಎಸ್‍ಡಿಎ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಅಮಾಯಕರಿಗೆ ವಂಚಿಸಿದ್ದರು.

ಹಲವು ದಿನಗಳಿಂದ ಇವರಿಬ್ಬರೂ ಇದೇ ವೃತ್ತಿ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಡಿವೈಎಸ್ಪಿ ಕೆಲಸ ಕೂಡ ಕೊಡಿಸ್ತೀವಿ ಅಂತ ಜನರಿಗೆ ಮೋಸ ಮಾಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿದ್ದರಿಂದ ಜನರು ನಂಬಿ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಲಕ್ಷಾಂತರ ರೂಪಾಯಿ ಕೊಟ್ಟಿದ್ದಾರೆ.

ಆರೋಪಿಗಳು ಅಭ್ಯರ್ಥಿಗಳಿಗೆ ನಾವು ಮೌಖಿಕ ಪರೀಕ್ಷೆವರೆಗೂ ಪಾಸ್ ಮಾಡಿಸುತ್ತೇವೆ ಎಂದು ನಂಬಿಸಿದ್ದರು. ಆದರೆ ಇತ್ತ ಕೆಲಸ ಕೊಡಿಸದೇ, ಕೊಟ್ಟಿರುವ ದುಡ್ಡುನ್ನು ವಾಪಾಸ್ಸು ನೀಡಿದೆ ಅಭ್ಯರ್ಥಿಗಳಿಗೆ ವಂಚಿಸಿದ್ದಾರೆ. ವಂಚನೆಗೊಳಗಾದ ಕೆಲವರು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಅಧಿಕಾರಿಗಳು ಸಿಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿತ್ತು.

ಸಿಸಿಬಿ ಪೊಲೀಸರು ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸಿ, ಖಚಿತ ಮಾಹಿತಿ ಮೇರೆಗೆ ಇಂದು ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಪಡೆಯ ಪೇದೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ದಾಖಲಾತಿಗಳು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *