ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್‌ಗೆ ಸಿಬಿಐ ಡ್ರಿಲ್

ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಎಡಿಜಿಪಿ ಕೆಎಸ್‌ಆರ್‌ಪಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ 1 ಗಂಟೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.

ಅಲೋಕ್ ಕುಮಾರ್ ನಿವಾಸದಲ್ಲೇ ಸತತ 1 ಗಂಟೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ಭೇಟಿ ಕೊಟ್ಟು ಅಲೋಕ್ ಕುಮಾರ್ ಅವರಿಗೆ ಸಿಬಿಐ ಶಾಕ್ ಕೊಟ್ಟಿದ್ದಾರೆ. ಅಲೋಕ್ ಅವರು ಬೆಂಗಳೂರು ಕಮೀಷನರ್ ಆಗಿದ್ದಾಗ ಫೋನ್ ಕದ್ದಾಲಿಕೆ ಪ್ರಕರಣ ನಡೆದಿದ್ದು, ಅಲೋಕ್ ಅವರ ಮನೆಯಲ್ಲೇ ಕದ್ದಾಲಿಕೆ ನಡೆದಿದೆ. ಎಲ್ಲಾ ಮಾಹಿತಿಯನ್ನು ಅವರು ಪೆನ್‍ಡ್ರೈವ್‍ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು ಎಂಬ ಆರೋಪವಿದೆ. ಆದ್ದರಿಂದ ಈ ಬಗ್ಗೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ಅಲೋಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ರೀತಿ ಫೋನ್ ಕದ್ದಾಲಿಕೆ ನಡೆದಿದೆ. ಇದರಲ್ಲಿ ಅನೇಕ ಐಎಎಸ್, ಐಪಿಎಸ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಹೆಸರು ಕೂಡ ಕೇಳಿಬಂದಿತ್ತು. ಅಲ್ಲದೆ ಅಲೋಕ್ ಕುಮಾರ್ ಅವರು ಕಮೀಷನರ್ ಹುದ್ದೆಯಿಂದ ಕೆಳಗಿಳಿದ ಬಳಿಕ ಕಚೇರಿಯಿಂದ ಸುಮಾರು 30 ಜಿಬಿಯಷ್ಟು ಆಡಿಯೋ ಕ್ಲಿಪ್ಪಿಂಗ್ಸ್ ಇದ್ದ ಆಡಿಯೋವನ್ನು ಅವರು ತೆಗೆದುಕೊಂಡು ಹೋಗಿದ್ದರು ಎಂಬ ಆರೋಪ ಕೂಡ ಇದೆ.

ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆ್ಯಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿತ್ತು. ಈ ಬಗ್ಗೆ ಸಿಬಿಐ ಈಗ ತನಿಖೆ ಕೈಗೊಂಡಿದೆ.

Comments

Leave a Reply

Your email address will not be published. Required fields are marked *