ಮಧ್ಯರಾತ್ರಿ ಪಟಾಕಿ ಹೊಡೆದ ಇಬ್ಬರ ಮೇಲೆ ಪ್ರಕರಣ ದಾಖಲು

ಮುಂಬೈ: ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪದ ಮೇಲೆ ಇಬ್ಬರು ಅನಾಮಿಕ ವ್ಯಕ್ತಿಗಳ ಮೇಲೆ ಮಹಾರಾಷ್ಟ್ರದ ಮನ್ಖರ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮನ್ಖರ್ಡ್‍ನಲ್ಲಿ ಇಬ್ಬರು ವ್ಯಕ್ತಿಗಳು ಪಟಾಕಿಯನ್ನು ಸಿಡಿಸಿ ಮಂಗಳವಾರ ತಡರಾತ್ರಿ ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಗಮನಿಸಿದ ಆರ್‌ಟಿಐ ಕಾರ್ಯಕರ್ತ ಶಖೀಲ್ ಅಹಮ್ಮದ್ ಶೇಖ್ ಸುಪ್ರೀಂ ಆದೇಶವನ್ನು ಮೀರಿ, ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ಪಟಾಕಿ ಹೊಡೆದಿದ್ದಾರೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ಸುಪ್ರೀಂ ಆದೇಶದ ಉಲ್ಲಂಘನೆ ಮೇರೆಗೆ ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‍ನ ತೀರ್ಪಿನ ನಂತರ ಪಟಾಕಿ ಹೊಡೆಯುವ ಸಂಬಂಧಕ್ಕೆ ದೇಶದಲ್ಲೇ ಇದೇ ಮೊದಲ ದೂರೆಂದು ಪೊಲೀಸರು ತಿಳಿಸಿದ್ದಾರೆ.

ಸುಪ್ರೀಂ ಹೇಳಿದ್ದು ಏನು?
ಅಕ್ಟೋಬರ್ 23ರಂದು ಸುಪ್ರೀಂ ಕೋರ್ಟಿನ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ದೇಶಾದ್ಯಂತ ಸಂಪೂರ್ಣವಾಗಿ ಪಟಾಕಿಯನ್ನು ನಿಷೇಧಿಸಲು ಸಾಧ್ಯವಿಲ್ಲ. ಅಲ್ಲದೇ ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸಬಹುದು. ಪಟಾಕಿಗಳನ್ನು ರಾತ್ರಿ 8 ರಿಂದ ರಾತ್ರಿ 10 ವರೆಗೆ ಮಾತ್ರ ಹೊಡೆಯಬೇಕೆಂದು ಆದೇಶ ನೀಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *