ಕಾರು ಮರಕ್ಕಿ ಡಿಕ್ಕಿಯಾಗಿ ಚಾಲಕ ಸಾವು- ಸ್ವಾಮೀಜಿಗೆ ಗಾಯ

ಗದಗ: ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ನರಗುಂದ ಹೊರವಲಯದಲ್ಲಿ ನಡೆದಿದೆ.

ಶ್ರೀಗಳು ಸವದತ್ತಿ ತಾಲೂಕಿನ ಹುಲಿ ಗ್ರಾಮದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ದುರ್ಘಟನೆ ನಡೆದಿದೆ. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಸಂಬಂಧಿಸಿದ ಕಾರು ಇದಾಗಿದೆ.

ವೇಗವಾಗಿ ಚಲಿಸುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ 39 ವರ್ಷದ ವೀರೇಶ್ ಕುರುಡಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೀರೇಶ್ ಕಳೆದ 14 ವರ್ಷಗಳಿಂದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಈ ಘಟನೆಯಲ್ಲಿ ಸ್ವಾಮೀಜಿಗೆ ಗಾಯವಾಗಿದ್ದು, ನರಗುಂದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಸ್‌ ಆಸ್ಪತ್ರೆಗೆ ರವಾನಿಸಾಗಿದೆ. ನರಗುಂದ ಆಸ್ಪತ್ರೆಗೆ ಸವದತ್ತಿ ಶಾಸಕ ಆನಂದ ಮಾಮನಿ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಅವರೇ ಖುದ್ದಾಗಿ ಬೆಳಗಾವಿಗೆ ಕರೆದುಕೊಂಡು ಹೋದರು. ಇದನ್ನೂ ಓದಿ: ಯುಪಿ ಸಿಎಂ ಕಚೇರಿಯ ಟ್ವಿಟ್ಟರ್ ಖಾತೆ ಹ್ಯಾಕ್

ಮೃತನ ಆತ್ಮಕ್ಕೆ ಶಾಂತಿ ಸಿಗಲಿ, ಸ್ವಾಮೀಜಿಗಳು ಬೇಗ ಗುಣಮುಖರಾಗಿ ಬರಲೆಂದು ಅನೇಕ ಭಕ್ತರು ಪ್ರಾರ್ಥಿಸುತ್ತಿದ್ದಾರೆ. ಈ ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *