ಕೆಲ್ಸ ಮುಗಿಸಿ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಹೊರಟಿದ್ದ ವೇಳೆ ನಡುರಸ್ತೆಯಲ್ಲೇ ಕಾರ್ ಪಲ್ಟಿ- ಇಬ್ಬರ ದುರ್ಮರಣ

ಹಾಸನ: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಸಿಂಗೇನಹಳ್ಳಿ ಬಳಿ ನಡೆದಿದೆ.

ಸುರೇಶ್ (37) ಮತ್ತು ಪ್ರದೀಪ್ (38) ಮೃತ ದುರ್ದೈವಿಗಳು. ಮೃತರನ್ನು ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಚನ್ನರಾಯಪಟ್ಟಣ ಅರಸೀಕೆರೆ ನಡುವಿನ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು, ಘಟನೆಯಿಂದ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸುರೇಶ್ ಮತ್ತು ಪ್ರದೀಪ್ ಸೇರಿದಂತೆ ಗಾಯಾಳುಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ತಮ್ಮ ಗ್ರಾಮಕ್ಕೆ ಒಟ್ಟಿಗೆ ಕಾರಿನಲ್ಲಿ ಇಂದು ಮುಂಜಾನೆ ಹೊರಟಿದ್ದರು. ಈ ಸಂದರ್ಭದಲ್ಲಿ ಕಾರು ವೇಗವಾಗಿ ಓಡಿಸುತ್ತಿದ್ದು, ರಸ್ತೆಯಲ್ಲಿ ಗುಂಡಿಯೊಂದರ ಮೇಲೆ ಓಡಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿಯೇ ಕಾರು ಪಲ್ಟಿ ಹೊಡೆದಿದೆ.

ಪಲ್ಟಿ ಹೊಡೆದ ರಭಸಕ್ಕೆ ಸುರೇಶ್ ಮತ್ತು ಪ್ರದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *