ರಸ್ತೆ ದಾಟ್ತಿದ್ದಾಗ ಪಾದಚಾರಿ ಮೇಲೆ ಕಾರು ಹರಿದು ಸ್ಥಳದಲ್ಲೇ ಸಾವು- ಚಾಲಕನಿಗೆ ಗಾಯ

ಬೆಂಗಳೂರು: ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.

28 ವರ್ಷದ ರಮೇಶ್ ಮೃತ ದುರ್ದೈವಿ. ಮೂಲತಃ ವಿಜಯಪುರದ ನಿವಾಸಿಯಾದ ರಮೇಶ ಕೂಡ ಕಾರು ಚಾಲಕರಾಗಿದ್ದಾರೆ.

ಶನಿವಾರ ಸಂಜೆ ವೇಳೆ ಮೆಟ್ರೋ ಸ್ಟೇಷನ್ ಬಳಿ ರಮೇಶ್ ರಸ್ತೆ ದಾಟುತ್ತಿದ್ದಾಗ ಕುಡಿದು ಕಾರು ಓಡಿಸುತ್ತಿದ್ದರಿಂದ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು, ನಂತ್ರ ಪದಾಚಾರಿ ಮೇಲೆ ಹರಿದಿದೆ. ಪರಿಣಾಮ ಪಾದಾಚಾರಿ ರಮೇಶ್ ತಲೆಯ ಭಾಗಕ್ಕೆ ತೀವ್ರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ಚಾಲಕನನ್ನು ಲಾವಾ ಬಿ.ಕೆ ಎಂದು ಗುರುತಿಸಲಾಗಿದ್ದು, ಅವರಿಗೆ ಸಣ್ಣಪುಟ್ಟಗಾಯಗಳಾಗಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕ ಲಾವಾ ಬಿ.ಕೆ ಅವರು ಮಡಿಕೇರಿಯಲ್ಲಿ ತಮ್ಮ ಸಂಬಂಧಿಕರ ಮನೆಗೆ ಕುಟುಂಬ ಸಮೇತ ತೆರಳಿದ್ದರು. ಆದರೆ ಇಂದು ಮಡಿಕೇರಿಯಿಂದ ಬೆಂಗಳೂರಿಗೆ ವಾಪಸ್ಸಾಗಿ ಕುಟುಂಬದವರನ್ನು ದಾಸರಹಳ್ಳಿಯಲ್ಲಿರುವ ಮನೆಗೆ ಡ್ರಾಪ್ ಮಾಡಿ ಬಂದಿದ್ದರು. ಪುನಃ ಗೆಳೆಯರ ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

ಸದ್ಯ ಘಟನಾ ಸ್ಥಳಕ್ಕೆ ಪೀಣ್ಯಾ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರು ಚಾಲಕನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಜೊತೆಗೆ ರಮೇಶ್ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.

Comments

Leave a Reply

Your email address will not be published. Required fields are marked *